Public Prime News

CLEAR VISION, TRUE MISSION

ಶಿವಮೊಗ್ಗ: ಕನ್ನಡ ಶಾಲೆಗಳ ಉಳಿವಿಗೆ ಶಿಕ್ಷಕನ ವಿಶಿಷ್ಟ ಪ್ರತಿಭಟನೆ; ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ರಕ್ತದಲ್ಲಿ ಪತ್ರ ಬರೆದ ಶಿಕಾರಿಪುರ ಶಿಕ್ಷಕ..!
education

ಶಿವಮೊಗ್ಗ: ಕನ್ನಡ ಶಾಲೆಗಳ ಉಳಿವಿಗೆ ಶಿಕ್ಷಕನ ವಿಶಿಷ್ಟ ಪ್ರತಿಭಟನೆ; ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ರಕ್ತದಲ್ಲಿ ಪತ್ರ ಬರೆದ ಶಿಕಾರಿಪುರ ಶಿಕ್ಷಕ..!

Public Prime News

Public Prime News

Reported by Public Prime News

ಶಿವಮೊಗ್ಗ: 

ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಿಗೆ ತುರ್ತಾಗಿ ವೇತನಾನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ, ಶಿಕಾರಿಪುರದ ಪ್ರಶಾಂತ್ ಸಿರೆಂಜೆ ಎಂಬ ಶಿಕ್ಷಕರೊಬ್ಬರು ನೇರವಾಗಿ ತಮ್ಮ ರಕ್ತದಲ್ಲೇ ಪತ್ರ ಬರೆದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವಿಶಿಷ್ಟ ಹಾಗೂ ಆಘಾತಕಾರಿ ಪ್ರತಿಭಟನೆಯು ರಾಜ್ಯ ಶೈಕ್ಷಣಿಕ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.


1995ರ ನಂತರ ಆರಂಭಗೊಂಡ ರಾಜ್ಯದ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳು ಮತ್ತು ಅಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ-ಬೋಧಕೇತರ ಸಿಬ್ಬಂದಿ ಕಳೆದ ಮೂರು ದಶಕಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಶಾಲೆಗಳಿಗೆ ಸರ್ಕಾರ ಕೂಡಲೇ ವೇತನಾನುದಾನ ಕಲ್ಪಿಸಬೇಕು ಎಂಬುದು ಶಿಕ್ಷಕರ ದೀರ್ಘಕಾಲದ ಬೇಡಿಕೆಯಾಗಿದೆ.


ಆದರೆ, ಸರ್ಕಾರದ ಕಡೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಮನನೊಂದ ಶಿಕ್ಷಕ ಪ್ರಶಾಂತ್ ಸಿರೆಂಜೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.


ತಮ್ಮ ರಕ್ತದ ಪತ್ರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹಿಂದಿನ "ನನ್ನ ರಕ್ತದಲ್ಲಿ ಕನ್ನಡವಿದೆ" ಎಂಬ ಮಾತನ್ನು ಉಲ್ಲೇಖಿಸಿರುವ ಶಿಕ್ಷಕ, ಇಂದು ಅದೇ ಕನ್ನಡ ಭಾಷೆಯನ್ನು ನಂಬಿ ಬದುಕು ಕಟ್ಟಿಕೊಂಡಿರುವ ಶಿಕ್ಷಕರ ಬದುಕು ಬೀದಿಗೆ ಬಿದ್ದಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅನುದಾನ ಬಿಡುಗಡೆ ಮಾಡದಿದ್ದರೆ ಮಾತ್ರ ಈ ಶಾಲೆಗಳ ನೌಕರರಿಗೆ ಸೂಕ್ತ ಸಂಬಳ ಸಿಗಲು ಸಾಧ್ಯ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.


ರಾಜ್ಯ ಸರ್ಕಾರ ಕೂಡಲೇ ಈ ಬೇಡಿಕೆಗೆ ಸ್ಪಂದಿಸದೇ ಹೋದರೆ, ಮುಂಬರುವ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನದಂದು ರಾಜ್ಯದ ಇತರೆ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರೂ ಸಹ ಇದೇ ರೀತಿಯಲ್ಲಿ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಉಗ್ರ ಹೋರಾಟವನ್ನು ತೀವ್ರಗೊಳಿಸಲಿದ್ದಾರೆ ಎಂದು ಪ್ರಶಾಂತ್ ಸಿರೆಂಜೆ ಸರ್ಕಾರದ ವಿರುದ್ಧ ಗಡುವು ನೀಡಿ ಎಚ್ಚರಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಶಿಕ್ಷಕನೊಬ್ಬ ರಕ್ತದಲ್ಲಿ ಪತ್ರ ಬರೆದಿರುವ ಈ ಕೃತ್ಯ ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

Share this story