ಉಡುಪಿ:
ಗಣೇಶ ಚತುರ್ಥಿಗೆ ದಿನಗಣನೆ ಶುರುವಾಗುತ್ತಿದ್ದಂತೆ ವಿಘ್ನವಿನಾಶಕನ ಮೂರ್ತಿಗಳಿಗೆ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ. ಆದರೆ, ಮಣ್ಣಿಗೆ ಅದ್ಭುತ ರೂಪ ನೀಡಿ ದೇವರಿಗೆ ಜೀವತುಂಬುವ ಕುಶಲಕರ್ಮಿಗಳಿಗೆ ಮಾತ್ರ ಈ ಬಾರಿ ಮಣ್ಣಿನ ಕೊರತೆಯ ಗಂಭೀರ ಸಮಸ್ಯೆ ಎದುರಾಗಿದೆ.
ಉಡುಪಿಯ ಕಿದಿಯೂರಿನ ಭಾಸ್ಕರ್ ಕೋಟ್ಯಾನ್ ಕುಟುಂಬ ಕಳೆದ 35 ವರ್ಷಗಳಿಂದ ನಿರಂತರವಾಗಿ ಗಣಪತಿ ಮೂರ್ತಿ ನಿರ್ಮಾಣ ಕಾಯಕದಲ್ಲಿ ತೊಡಗಿಸಿಕೊಂಡಿದೆ.
ಪ್ರತಿ ವರ್ಷ 10 ರಿಂದ 15ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸುವ ಈ ಕುಟುಂಬಕ್ಕೆ, ಈ ಬಾರಿ ಅಗತ್ಯವಿರುವ 'ಜೆಡಿ ಮಣ್ಣು' ಸಿಗದೆ ಸಂಕಷ್ಟ ಎದುರಾಗಿದೆ. ಮಣ್ಣು ಪೂರೈಸುತ್ತಿದ್ದ ಕಾರ್ಖಾನೆ ಬಂದ್ ಆಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಕಲೆಯ ಜೊತೆಗೆ ಕುಟುಂಬದ ಒಗ್ಗಟ್ಟು
ಮೂರ್ತಿ ನಿರ್ಮಾಣ ಇಲ್ಲಿ ಕೇವಲ ವೃತ್ತಿಯಲ್ಲ, ಅದೊಂದು ಭಾವನಾತ್ಮಕ ಅನುಬಂಧ. ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಮಕ್ಕಳು ಕೂಡ ಹಬ್ಬ ಸಮೀಪಿಸುತ್ತಿದ್ದಂತೆ ವಾಪಸ್ ಬಂದು ತಂದೆಯೊಂದಿಗೆ ಕೈಜೋಡಿಸುತ್ತಾರೆ. ಗಣಪನ ಆಗಮನದ ನೆಪದಲ್ಲಿ ಇಡೀ ಕುಟುಂಬ ಒಂದಾಗುವ ಈ ಕ್ಷಣಗಳು ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ.
ಆದರೆ ಮಣ್ಣಿನ ಕೊರತೆ ಹೀಗೆಯೇ ಮುಂದುವರಿದರೆ ಸಾಂಪ್ರದಾಯಿಕ ಕಲೆ ಮತ್ತು ಕಾಯಕಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಭಾಸ್ಕರ್ ಕೋಟ್ಯಾನ್ ಕಳವಳ ವ್ಯಕ್ತಪಡಿಸಿದ್ದಾರೆ. ಕುಶಲಕರ್ಮಿಗಳಿಗೆ ಅಗತ್ಯವಾದ ಮಣ್ಣು ಸರಾಗವಾಗಿ ದೊರೆತಾಗ ಮಾತ್ರ ಇಂತಹ ಪ್ರಾಚೀನ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ.


