ಬೆಂಗಳೂರು:
ರಾಜ್ಯಕ್ಕೆ ಈ ಬಾರಿ ಮುಂಗಾರು ಮಳೆ ಬೇಗನೆ ಪ್ರವೇಶಿಸುತ್ತಿದ್ದರೂ, ರೈತರಿಗೆ ರಸಗೊಬ್ಬರ ಕೊರತೆಯ ಆತಂಕ ಎದುರಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದಿಂದಾಗಿ ಜಾಗತಿಕ ಇಂಧನ ಅಭಾವ ಸೃಷ್ಟಿಯಾಗಿದ್ದು, ಇದು ರಸಗೊಬ್ಬರ ಪೂರೈಕೆಯ ಮೇಲೆ ನೇರ ಪರಿಣಾಮ ಬೀರಿದೆ.
ರಾಜ್ಯದಲ್ಲಿ ಸದ್ಯ 38 ಸಾವಿರ ಟನ್ ರಸಗೊಬ್ಬರ ಹಾಗೂ 14 ಸಾವಿರ ಟನ್ ಯೂರಿಯಾ ಕೊರತೆಯಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಆರಂಭಿಕ ದಾಸ್ತಾನು ಗಣನೀಯವಾಗಿ ಕುಸಿದಿದೆ. ಮೇ ತಿಂಗಳಿಗೆ 4.54 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಅಗತ್ಯವಿದ್ದು, ಕೇವಲ 1.77 ಲಕ್ಷ ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ. ಇನ್ನುಳಿದ 2.77 ಲಕ್ಷ ಮೆಟ್ರಿಕ್ ಟನ್ ಕೇಂದ್ರದಿಂದ ಬರಬೇಕಿದೆ.
ಕೊರತೆಯ ನಡುವೆ ಕಾಳಸಂತೆ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅರ್ಹ ರೈತರಿಗೆ ಮಾತ್ರ ಗೊಬ್ಬರ ಸಿಗಲು ‘FRUITS’ ಐಡಿ ಕಡ್ಡಾಯಗೊಳಿಸಿದೆ. ಲಭ್ಯತೆ ಕಡಿಮೆ ಇರುವುದರಿಂದ ರೈತರು ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ, ಪರ್ಯಾಯ ಸಾವಯವ ವಿಧಾನಗಳನ್ನು ಬಳಸುವಂತೆ ಸಚಿವರು ಮನವಿ ಮಾಡಿದ್ದಾರೆ. ಜೂನ್ನಲ್ಲಿ ಬಿತ್ತನೆ ತೀವ್ರಗೊಳ್ಳಲಿದ್ದು, ಅಷ್ಟರೊಳಗೆ ಪೂರೈಕೆ ಸುಧಾರಿಸದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.


