ಬೆಂಗಳೂರು:
ಕರ್ನಾಟಕ ರಾಜಕಾರಣದಲ್ಲಿ ಈಗ ಹೈವೋಲ್ಟೇಜ್ ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಹತ್ವದ ನಿರ್ಧಾರ ಕೈಗೊಂಡ ಬೆನ್ನಲ್ಲೇ, ಇತ್ತ ಪ್ರತಿಪಕ್ಷ ಬಿಜೆಪಿಯಲ್ಲೂ 'ಬಿಗ್ ಪಲ್ಲಟ'ಕ್ಕೆ ಕೌಂಟ್ಡೌನ್ ಶುರುವಾಗಿದೆ.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಗದ್ದುಗೆ ಇಳಿದು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದರೆ, ಇತ್ತ ಬಿಜೆಪಿಯಲ್ಲಿ ಆರ್. ಅಶೋಕ್ ಅವರ ಪ್ರತಿಪಕ್ಷ ನಾಯಕನ ಸ್ಥಾನ ಬದಲಾವಣೆಯಾಗಲಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ಹೊಸ ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ, ಕಾರ್ಕಳದ ಶಾಸಕ, ಹಿಂದುಳಿದ ವರ್ಗದ ಫೈರ್ಬ್ರಾಂಡ್ ನಾಯಕ ವಿ. ಸುನಿಲ್ ಕುಮಾರ್ ಹೆಸರು ಈಗ ಮುಂಚೂಣಿಗೆ ಬಂದಿದೆ.
17 ವರ್ಷಗಳ ಸಿದ್ದರಾಮಯ್ಯ ಯುಗಾಂತ್ಯ: ಉಲ್ಟಾಪಲ್ಟಾ ಆಯ್ತು ಜಾತಿ ಲೆಕ್ಕಾಚಾರ.
ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಅಹಿಂದ ವರ್ಗಗಳ ಚಾಂಪಿಯನ್ ಆಗಿ ಗುರುತಿಸಿಕೊಂಡಿದ್ದ ಸಿದ್ದರಾಮಯ್ಯ ಅವರು ಬರೋಬ್ಬರಿ 17 ವರ್ಷಗಳ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕನ ಸ್ಥಾನವನ್ನು ತ್ಯಜಿಸಿದ್ದಾರೆ. ಒಕ್ಕಲಿಗ ಸಮುದಾಯದ ಪವರ್ಫುಲ್ ಲೀಡರ್ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದರಿಂದ, ಬಿಜೆಪಿಯಲ್ಲೂ ಈಗ ಅನಿವಾರ್ಯವಾಗಿ ಜಾತಿ ಮತ್ತು ಪ್ರದೇಶವಾರು ಹಂಚಿಕೆಯ ಲೆಕ್ಕಾಚಾರಗಳು ಸಂಪೂರ್ಣ ಉಲ್ಟಾಪಲ್ಟಾ ಆಗಿವೆ. ಆಡಳಿತ ಪಕ್ಷದ ಈ ನಡೆಗೆ ಕೌಂಟರ್ ಕೊಡಲು ಬಿಜೆಪಿ ಹೈಕಮಾಂಡ್ ಹೊಸ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.
ಆರ್. ಅಶೋಕ್ ಬದಲಾವಣೆ ಯಾಕೆ.? ಇಲ್ಲಿರೋ ಅಸಲಿ ಟ್ವಿಸ್ಟ್ ಏನು.?
ಹಿಂದೆ ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ಒಕ್ಕಲಿಗ ಸಮುದಾಯದ ಆರ್. ಅಶೋಕ್ ಅವರಿಗೆ ಬಿಜೆಪಿ ವಿಪಕ್ಷ ನಾಯಕನ ಸ್ಥಾನ ನೀಡಿ ಸಮತೋಲನ ಕಾಯ್ದುಕೊಂಡಿತ್ತು. ಆದರೆ, ಈಗ ಸಿಎಂ ಕುರ್ಚಿಯಲ್ಲಿ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಅವರೇ ಬಂದು ಕೂರುತ್ತಿರುವುದರಿಂದ, ಪ್ರತಿಪಕ್ಷ ಸ್ಥಾನದಲ್ಲೂ ಅದೇ ಸಮುದಾಯದ ನಾಯಕ ಇರುವುದು ರಾಜಕೀಯವಾಗಿ ಅಷ್ಟಾಗಿ ವರ್ಕೌಟ್ ಆಗಲ್ಲ ಎಂಬುದು ಬಿಜೆಪಿಯ ಆಲೋಚನೆ.
ಹೀಗಾಗಿ, ಡಿಕೆಶಿ ಅವರ ಒಕ್ಕಲಿಗ ಕಾರ್ಡ್ಗೆ ಕೌಂಟರ್ ಕೊಡಲು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಹಿಂದುಳಿದ ವರ್ಗದ (OBC) ಪ್ರಭಾವಿ ನಾಯಕರನ್ನು ತರುವುದು ಬಿಜೆಪಿಯ ಸದ್ಯದ ರಣತಂತ್ರವಾಗಿದೆ.
ರೇಸ್ನಲ್ಲಿ ಮುಂಚೂಣಿಗೆ ಬಂದ ಕಾರ್ಕಳದ 'ಫೈರ್ಬ್ರಾಂಡ್' ಸುನಿಲ್ ಕುಮಾರ್.!
ಬಿಜೆಪಿಯಲ್ಲಿ ಹಿಂದುಳಿದ ವರ್ಗದ ಹಿರಿಯ ನಾಯಕರಾಗಿದ್ದ ಗೋವಿಂದ ಕಾರಜೋಳ ಅವರು ಈಗ ಲೋಕಸಭೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಸದ್ಯ ವಿಧಾನಸಭೆಯಲ್ಲಿ ಸದನದ ಒಳಗೂ ಮತ್ತು ಹೊರಗೂ ಭರ್ಜರಿ ವಾದ ಮಂಡಿಸಿ, ಹಿಂದುತ್ವ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಧ್ವನಿ ಎತ್ತಿ ಹೈಕಮಾಂಡ್ ಗಮನ ಸೆಳೆದಿರುವ ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಹೆಸರು ಈಗ ರೇಸ್ನಲ್ಲಿ ಫ್ರಂಟ್ ಲೈನ್ಗೆ ಬಂದಿದೆ. ಕರಾವಳಿ ಭಾಗದ ಹಾಗೂ ಹಿಂದುಳಿದ ವರ್ಗದ ಯುವ ನಾಯಕನಿಗೆ ಮಣೆ ಹಾಕುವ ಮೂಲಕ ಕಾಂಗ್ರೆಸ್ಗೆ ಟಕ್ಕರ್ ಕೊಡಲು ಬಿಜೆಪಿ ಸಜ್ಜಾಗುತ್ತಿದೆ.
ಆಡಳಿತ ಪಕ್ಷದ ಪ್ರತಿಯೊಂದು ನಡೆಗೂ ಕೌಂಟರ್ ಕೊಡಲು ಪ್ರತಿಪಕ್ಷ ಬಿಜೆಪಿ ಈಗಿನಿಂದಲೇ ಭರ್ಜರಿ ಸಾಂಸ್ಥಿಕ ಬದಲಾವಣೆಯ ಮುನ್ಸೂಚನೆ ನೀಡಿದೆ. ವಿಧಾನಸೌಧದ ಪ್ರತಿಪಕ್ಷ ನಾಯಕನ ಕುರ್ಚಿಯಲ್ಲಿ ಕಾರ್ಕಳದ ನಾಯಕ ವಿ. ಸುನಿಲ್ ಕುಮಾರ್ ಕೂರ್ತಾರಾ.? ಅಥವಾ ಆರ್. ಅಶೋಕ್ ಅವರೇ ಸ್ಥಾನ ಉಳಿಸಿಕೊಳ್ಳುತ್ತಾರಾ.? ಎಂಬುದನ್ನು ಕಾದು ನೋಡಬೇಕಿದೆ.


