Public Prime News

CLEAR VISION, TRUE MISSION

ಮದುವೆ ನೋಂದಣಿಗೆ ಆಧಾರ್ ಕಾರ್ಡ್‌ ಅಂತಿಮವಲ್ಲ: ಬಾಲ್ಯ ವಿವಾಹ ತಡೆಗೆ ರಾಜ್ಯ ಸರ್ಕಾರದ ಕಠಿಣ ರೂಲ್ಸ್
kannadanadi

ಮದುವೆ ನೋಂದಣಿಗೆ ಆಧಾರ್ ಕಾರ್ಡ್‌ ಅಂತಿಮವಲ್ಲ: ಬಾಲ್ಯ ವಿವಾಹ ತಡೆಗೆ ರಾಜ್ಯ ಸರ್ಕಾರದ ಕಠಿಣ ರೂಲ್ಸ್

Public Prime News

Public Prime News

Reported by Public Prime News

ಬೆಂಗಳೂರು:

ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಮಹತ್ವದ ಹಾಗೂ ಕಠಿಣ ಹೆಜ್ಜೆ ಇಟ್ಟಿದೆ. 


ವಿವಾಹ ನೋಂದಣಿ ವೇಳೆ ಕೇವಲ ಆಧಾರ್ ಕಾರ್ಡ್ ಅನ್ನು ಮಾತ್ರ ವಯಸ್ಸಿನ ಅಧಿಕೃತ ಪುರಾವೆಯಾಗಿ ಪರಿಗಣಿಸುವುದಕ್ಕೆ ತಡೆಹಾಕುವಂತೆ ಆಯೋಗವು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆಧಾರ್ ಕಾರ್ಡ್ ಆಧಾರದ ಮೇಲೆ ವಯಸ್ಸು ನಿಗದಿಪಡಿಸುವುದರಿಂದ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುವ ಆತಂಕವಿದ್ದು, ಈ ಕುರಿತು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಾಗಿದೆ.


ಆಧಾರ್ ಕಾರ್ಡ್ ಏಕೆ ವಯಸ್ಸಿನ ಅಂತಿಮ ಪುರಾವೆಯಲ್ಲ..?

ಸಾಮಾನ್ಯವಾಗಿ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯನ್ನಾಗಿ ಬಳಸಲಾಗುತ್ತದೆ ಹೊರತು, ಅದನ್ನೇ ವಯಸ್ಸಿನ ನಿರ್ಣಾಯಕ ಮತ್ತು ಅಂತಿಮ ಪ್ರಮಾಣಪತ್ರವಾಗಿ ಪರಿಗಣಿಸಲು ಕಾನೂನುಬದ್ಧವಾಗಿ ಸಾಧ್ಯವಿಲ್ಲ. 


ಹಲವು ಸಂದರ್ಭಗಳಲ್ಲಿ ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾಗುವ ಜನ್ಮ ದಿನಾಂಕವು ಸ್ವಯಂ-ಘೋಷಣೆ  ಅಥವಾ ಇತರ ಬೆಂಬಲ ದಾಖಲೆಗಳ ಆಧಾರದ ಮೇಲೆ ಸಿದ್ಧಗೊಂಡಿರುತ್ತದೆ. ಇದನ್ನು ದುರುಪಯೋಗಪಡಿಸಿಕೊಂಡು ಅಪ್ರಾಪ್ತರ ವಯಸ್ಸನ್ನು ಬದಲಾಯಿಸಿ ಮದುವೆ ಮಾಡಿಸುತ್ತಿರುವ ನಿದರ್ಶನಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆಯೋಗ ಈ ಗಂಭೀರ ನಿರ್ಧಾರ ಕೈಗೊಂಡಿದೆ.


ಯಾವ ದಾಖಲೆಗಳು ಕಡ್ಡಾಯ..?

ಮದುವೆ ನೋಂದಣಿ ಅಥವಾ ವಯಸ್ಸಿನ ದೃಢೀಕರಣಕ್ಕಾಗಿ ಅಧಿಕಾರಿಗಳು ಕಡ್ಡಾಯವಾಗಿ ಈ ಕೆಳಗಿನ ಅಧಿಕೃತ ದಾಖಲೆಗಳನ್ನು ಮಾತ್ರ ಪರಿಗಣಿಸಬೇಕು ಎಂದು KSCPCR ಸ್ಪಷ್ಟಪಡಿಸಿದೆ:


  1. ಜನನ ಪ್ರಮಾಣ ಪತ್ರ


  2. ಶಾಲಾ ದಾಖಲೆಗಳು ಅಥವಾ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ


  3. ವಿಶೇಷ ಸಂದರ್ಭಗಳಲ್ಲಿ ಅಥವಾ ಮೇಲಿನ ದಾಖಲೆಗಳು ಲಭ್ಯವಿಲ್ಲದಿದ್ದಲ್ಲಿ, ಜಿಲ್ಲಾ ವೈದ್ಯಾಧಿಕಾರಿಗಳ ವಯೋ ದೃಢೀಕರಣ ವೈದ್ಯಕೀಯ ವರದಿ (Medical Certificate).


ಹೈಕೋರ್ಟ್‌ಗಳ ಹಿಂದಿನ ಕೆಲವು ತೀರ್ಪುಗಳು ಮತ್ತು ಕಾನೂನು ತಜ್ಞರ ಅಭಿಪ್ರಾಯದಂತೆ, ಆಧಾರ್ ಕಾರ್ಡ್ ವಯಸ್ಸನ್ನು ಖಚಿತಪಡಿಸುವ ಅಂತಿಮ ದಾಖಲೆಯಲ್ಲ ಎಂಬುದು ಸಾಬೀತಾಗಿದೆ. ಶಾಲಾ ದಾಖಲೆಗಳು ಮತ್ತು ಆಧಾರ್ ಕಾರ್ಡ್ ನಡುವಿನ ವಯಸ್ಸಿನ ವ್ಯತ್ಯಾಸಗಳನ್ನು ಮುಂದಿಟ್ಟುಕೊಂಡು ಅಪ್ರಾಪ್ತ ವಯಸ್ಸಿನ ಮದುವೆಗಳ ಕಾನೂನು ತೊಡಕುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವವರ ವಿರುದ್ಧವೂ ಇದು ಕಡಿವಾಣ ಹಾಕಲಿದೆ.


ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಹಾಗೂ ಜಾಗೃತಿ ಅಭಿಯಾನ

ನೋಂದಣಿ ಅಧಿಕಾರಿಗಳು ಮದುವೆಗಳ ಕಾನೂನುಬದ್ಧತೆಯನ್ನು ಪರಿಶೀಲಿಸುವಾಗ ಕೇವಲ ಆಧಾರ್ ಕಾರ್ಡ್ ಅನ್ನು ಮಾತ್ರ ನಂಬಿ ಮುಂದುವರಿಯಬಾರದು ಎಂದು ಮುದ್ರಣ ಮತ್ತು ನೋಂದಣಿ ಇಲಾಖೆಯ ಮಹಾನಿರೀಕ್ಷಕರಿಗೆ ಹಾಗೂ ಆಯುಕ್ತರಿಗೆ ಆಯೋಗ ಪತ್ರ ಬರೆದಿದೆ. 


ಅಲ್ಲದೆ, ಈ ನಿಯಮಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಗ್ರಾಮ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಸೂಕ್ತ ಜಾಗೃತಿ ಮೂಡಿಸುವಂತೆ ಶಿಫಾರಸು ಮಾಡಲಾಗಿದೆ.


"ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿಡುವುದು ಮತ್ತು ಬಾಲ್ಯ ವಿವಾಹದಂತಹ ಪಿಡುಗನ್ನು ಸಮಾಜದಿಂದ ಸಂಪೂರ್ಣವಾಗಿ ಕಿತ್ತೂಗೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನದಿಂದ ಮಾತ್ರ ಅಪ್ರಾಪ್ತ ಮಕ್ಕಳ ಬದುಕು ಹಸನಾಗಲು ಸಾಧ್ಯ" ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Share this story