ಉಡುಪಿ:
ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಪಡುಬಿದ್ರಿ ಕಡಿಪಟ್ಟ ಕಡಲತೀರಕ್ಕೆ ಬಂದು ನಿಂತಿದ್ದ ‘ಅಲಯನ್ಸ್’ ಟಗ್ ಐದು ವರ್ಷಗಳಾದರೂ ಸಂಪೂರ್ಣವಾಗಿ ತೆರವುಗೊಳ್ಳದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೀನುಗಾರಿಕೆಗೆ ಅಡ್ಡಿಯಾಗುತ್ತಿರುವ ಈ ಟಗ್ನ ಅವಶೇಷಗಳು ಇದೀಗ ಪ್ರವಾಸಿಗರ ಸುರಕ್ಷತೆಗೂ ಸವಾಲಾಗಿ ಪರಿಣಮಿಸಿವೆ. ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಟಗ್ ಪ್ರವಾಸಿಗರ ‘ಸೆಲ್ಫಿ ಸ್ಪಾಟ್’ ಆಗಿ ಮಾರ್ಪಟ್ಟಿರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ.
ತೌಕ್ತೆ ಅಬ್ಬರಕ್ಕೆ ತೀರಕ್ಕೆ ಬಂದ ಟಗ್
2021ರಲ್ಲಿ ಸಂಭವಿಸಿದ ತೌಕ್ತೆ ಚಂಡಮಾರುತದ ವೇಳೆ ಮಂಗಳೂರಿನ ಸಮುದ್ರದಲ್ಲಿ ಈ ಟಗ್ ಅಪಘಾತಕ್ಕೀಡಾಗಿತ್ತು. ಬಳಿಕ ಸಮುದ್ರದ ಪ್ರಬಲ ಅಲೆಗಳ ಹೊಡೆತಕ್ಕೆ ಸಿಲುಕಿ ಪಡುಬಿದ್ರಿ ಕಡಿಪಟ್ಟ ಕಡಲತೀರಕ್ಕೆ ಬಂದು ನಿಂತಿತ್ತು.
ಟಗ್ನಲ್ಲಿ ಒಟ್ಟು ಎಂಟು ಮಂದಿ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದರು. ಇಬ್ಬರು ನಾಪತ್ತೆಯಾಗಿದ್ದರೆ, ಮೂವರು ಸಿಬ್ಬಂದಿ ಬದುಕುಳಿದಿದ್ದರು.
ತೆರವು ಕಾರ್ಯಕ್ಕೆ ಏಕೆ ವಿಳಂಬ.?
ಟಗ್ ತೆರವಿಗೆ ಹಲವು ಬಾರಿ ಪ್ರಯತ್ನ ನಡೆದಿದ್ದರೂ, ಅಗತ್ಯ ಅನುಮತಿ ಹಾಗೂ ವಿವಿಧ ಕ್ಲಿಯರೆನ್ಸ್ಗಳ ಸಮಸ್ಯೆಯಿಂದಾಗಿ ಕಾರ್ಯ ವಿಳಂಬವಾಗಿದೆ.
2022ರಲ್ಲಿ ಟಗ್ ಅನ್ನು ಸ್ಕ್ರ್ಯಾಪ್ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ, ಸೂಕ್ತ ಬಿಡ್ಡರ್ ಸಿಗದ ಕಾರಣ ತೆರವು ಕಾರ್ಯ ಮುಂದುವರಿಯಲಿಲ್ಲ ಎಂದು ತಿಳಿದುಬಂದಿದೆ.
ಈ ಟಗ್ ಅಂಡರ್ವಾಟರ್ ಸರ್ವೀಸಸ್ ಕಂಪನಿ ಲಿಮಿಟೆಡ್ಗೆ ಸೇರಿದ್ದು, ಎಂಆರ್ಪಿಎಲ್ನ ಸಿಂಗಲ್ ಪಾಯಿಂಟ್ ಮೂರಿಂಗ್ (SPM) ಕಾರ್ಯಾಚರಣೆಗೆ ಗುತ್ತಿಗೆ ಆಧಾರದ ಮೇಲೆ ಸೇವೆ ನೀಡುತ್ತಿತ್ತು.
ಮೀನುಗಾರಿಕೆಗೂ ಸಮಸ್ಯೆ
ಕಡಲತೀರದಲ್ಲಿ ಉಳಿದಿರುವ ಟಗ್ನ ಅವಶೇಷಗಳು ಸ್ಥಳೀಯ ಮೀನುಗಾರರ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಕಡಲತೀರದ ಪರಿಸರ ಹಾಗೂ ಮೀನುಗಾರಿಕೆ ಚಟುವಟಿಕೆಗಳ ಮೇಲೂ ಇದರ ಪರಿಣಾಮ ಬೀಳುತ್ತಿರುವುದರಿಂದ, ಆದಷ್ಟು ಶೀಘ್ರ ಟಗ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
ಸೆಲ್ಫಿ ಸ್ಪಾಟ್ ಆಗಿರುವುದು ಆತಂಕ
ಅಪಾಯಕಾರಿ ಸ್ಥಿತಿಯಲ್ಲಿರುವ ಟಗ್ ಇದೀಗ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಕೆಲವರು ಟಗ್ನ ಅವಶೇಷಗಳ ಮೇಲೆ ಹತ್ತಿ ಫೋಟೋ ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ಅಲೆಗಳ ನಡುವೆ ಟಗ್ನ ಸಮೀಪಕ್ಕೆ ತೆರಳುವುದು ಅಥವಾ ಅದರ ಅವಶೇಷಗಳ ಮೇಲೆ ಹತ್ತುವುದು ಯಾವುದೇ ಕ್ಷಣದಲ್ಲಿ ಅನಾಹುತಕ್ಕೆ ಕಾರಣವಾಗಬಹುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ತೆರವು ಯಾವಾಗ.?
ಐದು ವರ್ಷಗಳಾದರೂ ಟಗ್ ಸಂಪೂರ್ಣವಾಗಿ ತೆರವುಗೊಳ್ಳದಿರುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಮೀನುಗಾರಿಕೆ, ಪರಿಸರ ಹಾಗೂ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಗ್ ಸಂಪೂರ್ಣ ತೆರವುಗೊಳ್ಳುವವರೆಗೆ ಪ್ರವಾಸಿಗರು ಅದರ ಸಮೀಪಕ್ಕೆ ತೆರಳದಂತೆ ನಿರ್ಬಂಧ ಹೇರಿ, ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


