ಹುಬ್ಬಳ್ಳಿ:
ಆಟವಾಡಲು ಹೋದ ಮುಗ್ಧ ಬಾಲಕನೊಬ್ಬ ನಿರ್ಮಾಣ ಹಂತದ ಕಟ್ಟಡದ ಪಿಲ್ಲರ್ (ಕಾಲಂ) ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಕರುಣಾಜನಕ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ನಡೆದಿದೆ. ಉದಯನಗರದ ನಿವಾಸಿ ಬಾಲಾಜಿ (9) ಮೃತಪಟ್ಟ ದುರ್ದೈವಿ.
ಘಟನೆಯ ವಿವರ:
ಬಾಲಾಜಿ ತನ್ನ ಸ್ನೇಹಿತರೊಂದಿಗೆ ವಿಜಯನಗರದ ನಿರ್ಮಾಣ ಹಂತದ ಕಟ್ಟಡವೊಂದರ ಆವರಣದಲ್ಲಿ ತೆಂಗಿನಕಾಯಿ ಕೀಳಲು ಹೋಗಿದ್ದಾಗ, ನೀರು ತುಂಬಿದ್ದ ಆಳವಾದ ಪಿಲ್ಲರ್ ಗುಂಡಿಗೆ ಕಾಲು ಜಾರಿ ಬಿದ್ದಿದ್ದಾನೆ. ಬಾಲಕ ಗುಂಡಿಗೆ ಬೀಳುತ್ತಿದ್ದಂತೆ ಹೆದರಿದ ಆತನ ಗೆಳೆಯರು, ತಮಗೆ ಬೈಯಬಹುದು ಎಂಬ ಬಾಲಸಹಜ ಭಯದಿಂದ ಯಾರಿಗೂ ವಿಷಯ ತಿಳಿಸದೆ ಅಲ್ಲಿಂದ ಓಡಿಹೋಗಿದ್ದಾರೆ.
ಬಯಲಾದ ಸತ್ಯ:
ಮಗ ಮನೆಗೆ ಬಾರದೇ ಇದ್ದಾಗ ಪೋಷಕರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಬಾಲಾಜಿ ಜೊತೆಗಿದ್ದ ಸ್ನೇಹಿತರನ್ನು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ. ಗೆಳೆಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪಿಲ್ಲರ್ ಗುಂಡಿಯಲ್ಲಿದ್ದ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಕಟ್ಟಡ ನಿರ್ಮಾಣಕಾರರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


