ಬೆಂಗಳೂರು:
ರಾಜ್ಯ ರಾಜಕಾರಣದ ಬಹುದೊಡ್ಡ ಕುತೂಹಲಕ್ಕೆ ತೆರೆಬಿದ್ದಿದ್ದು, ಮುಖ್ಯಮಂತ್ರಿ ಸ್ಥಾನದ ಆಯ್ಕೆ ಫೈನಲ್ ಆಗುತ್ತಿದ್ದಂತೆಯೇ ಸಚಿವ ಸಂಪುಟ ರಚನೆಯ ಕಸರತ್ತು ಅಂತಿಮ ಘಟ್ಟ ತಲುಪಿದೆ. ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಲು ದೆಹಲಿಗೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಡರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮೂಲಗಳ ಪ್ರಕಾರ, ಸಿಎಂ ಪದಗ್ರಹಣದ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕಾದ ಸಚಿವರ ಅಂತಿಮ ಪಟ್ಟಿಯನ್ನು ಹೈಕಮಾಂಡ್ ಜೊತೆ ಚರ್ಚಿಸಿ ಡಿಕೆಶಿ ದೆಹಲಿಯಿಂದಲೇ ಸಿದ್ಧಪಡಿಸಿಕೊಂಡು ಬಂದಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ನಡೆದ ಮಿಡ್ ನೈಟ್ ಮೀಟಿಂಗ್ ವಿವರ:
ದೆಹಲಿ ಪ್ರವಾಸ ಮುಗಿಸಿ ದೇವನಹಳ್ಳಿ ವಿಮಾನ ನಿಲ್ದಾಣದ ಮೂಲಕ ಸದಾಶಿವನಗರದ ತಮ್ಮ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ತಲುಪುತ್ತಿದ್ದಂತೆಯೇ, ಅಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಡಿಕೆಶಿ ಬರುವ ಮುನ್ನವೇ ಅವರ ನಿವಾಸಕ್ಕೆ ಬಂದು ಕಾಯುತ್ತಿದ್ದ ಮಂಡ್ಯ ಭಾಗದ ಪ್ರಮುಖ ಕಾಂಗ್ರೆಸ್ ನಾಯಕರು, ಮಧ್ಯರಾತ್ರಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಸಭೆಯಲ್ಲಿದ್ದ ಪ್ರಮುಖ ನಾಯಕರು:
ಈ ತಡರಾತ್ರಿಯ ಮಹತ್ವದ ಸಭೆಯಲ್ಲಿ ಸಚಿವ ಚಲುವರಾಯಸ್ವಾಮಿ, ಶಾಸಕ ರವಿ ಗಾಣಿಗ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಕದಲೂರು ಉದಯ್, ರಮೇಶ್ ಬಂಡಿಸಿದ್ದೇಗೌಡ ಹಾಗೂ ಡಿಕೆಶಿ ಆಪ್ತ ನಾಯಕ ಬೇಳೂರು ಗೋಪಾಲಕೃಷ್ಣ ಭಾಗಿಯಾಗಿದ್ದರು. ಇವರೊಂದಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮತ್ತು ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಕೂಡ ಉಪಸ್ಥಿತರಿದ್ದರು.
ಚರ್ಚೆಯಾದ ಪ್ರಮುಖ ವಿಷಯಗಳು:
ಮುಂಬರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ, ಸಚಿವ ಸ್ಥಾನಗಳ ಹಂಚಿಕೆ ಹಾಗೂ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳ ಕುರಿತು ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.
ಮಂಡ್ಯ ನಾಯಕರ ಭಾರಿ ಲಾಬಿ:
ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಈಗಾಗಲೇ ಭಾರಿ ಪೈಪೋಟಿ ಆರಂಭವಾಗಿದ್ದು, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರು ತಮಗೆ ಸಂಪುಟದಲ್ಲಿ ಸೂಕ್ತ ಮತ್ತು ಪ್ರಭಾವಿ ಸ್ಥಾನಮಾನ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ಅವರ ಮುಂದೆ ಬಲವಾದ ಬೇಡಿಕೆ ಇಟ್ಟಿದ್ದಾರೆ.
ದೆಹಲಿಗೆ ಹೋಗುವಾಗಲೇ ಸಂಭಾವ್ಯರ ಪಟ್ಟಿಯೊಂದಿಗೆ ಹೋಗಿದ್ದ ಡಿ.ಕೆ. ಶಿವಕುಮಾರ್, ಹೈಕಮಾಂಡ್ ಒಪ್ಪಿಗೆಯೊಂದಿಗೆ ಸಚಿವರ ಲಿಸ್ಟ್ ಅಂತಿಮಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಮಂಡ್ಯ ಜಿಲ್ಲೆಯ ನಾಯಕರು ತಡರಾತ್ರಿ ಒಟ್ಟಾಗಿ ಭೇಟಿಯಾಗಿರುವುದು ಹೊಸ ಸಂಪುಟದಲ್ಲಿ ತಮ್ಮ ಜಿಲ್ಲೆಗೆ ಸಿಗಲಿರುವ ಪ್ರಾತಿನಿಧ್ಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ರಾಜಕೀಯ ಗೇಮ್ ಪ್ಲಾನ್ ಎನ್ನಲಾಗಿದೆ.


