ಉಡುಪಿ :
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಅತಿ ವೇಗವಾಗಿ ಚಲಿಸುವ ವಾಹನಗಳಿಗೆ ಬ್ರೇಕ್ ಹಾಕಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಭರ್ಜರಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಆರು ಆಯಕಟ್ಟಿನ ಸ್ಥಳಗಳಲ್ಲಿ ಅತ್ಯಾಧುನಿಕ ಸ್ಪೀಡ್ ರಾಡಾರ್ ಕ್ಯಾಮೆರಾ ಗಳನ್ನು ಅಳವಡಿಸುವ ಮೂಲಕ ಓವರ್ ಸ್ಪೀಡ್ ಸವಾರರಿಗೆ ಬಿಗಿ ಪೆನಾಲ್ಟಿ ವಿಧಿಸಲು ಸಜ್ಜಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ಮತ್ತು 169A ರ ವ್ಯಾಪ್ತಿಯಲ್ಲಿ ಬರುವ ಈ ಕೆಳಗಿನ ಪ್ರಮುಖ ಬ್ಲ್ಯಾಕ್ ಸ್ಪಾಟ್ ಹಾಗೂ ಅಪಘಾತ ವಲಯಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ:
1.ಉದ್ಯಾವರ ಬೊಬ್ಬರ್ಯನಕಟ್ಟೆ (ರಾಷ್ಟ್ರೀಯ ಹೆದ್ದಾರಿ 66)
2.ಕಲ್ಯಾಣಪುರ ಸಂತೆಕಟ್ಟೆ (ರಾಷ್ಟ್ರೀಯ ಹೆದ್ದಾರಿ 66)
3.ಅಂಬಲಪಾಡಿ ಜಂಕ್ಷನ್ (ರಾಷ್ಟ್ರೀಯ ಹೆದ್ದಾರಿ 66)
4.ಮಣಿಪಾಲ ಈಶ್ವರನಗರ (ರಾಷ್ಟ್ರೀಯ ಹೆದ್ದಾರಿ 169A)
5.ಕೋಟ ಜಂಕ್ಷನ್ (ರಾಷ್ಟ್ರೀಯ ಹೆದ್ದಾರಿ 66)
6.ಕುಂದಾಪುರ ಸಂಗಮ್ ಜಂಕ್ಷನ್ (ರಾಷ್ಟ್ರೀಯ ಹೆದ್ದಾರಿ 66)
ಸ್ವಯಂಚಾಲಿತ ವೇಗ ಪತ್ತೆ:
ಹೆದ್ದಾರಿಯಲ್ಲಿ ನಿಗದಿಪಡಿಸಿದ ವೇಗದ ಮಿತಿಗಿಂತ ಹೆಚ್ಚು ವೇಗವಾಗಿ ಚಲಿಸುವ ವಾಹನಗಳನ್ನು ಈ ಹೈಟೆಕ್ ರಾಡಾರ್ ಕ್ಯಾಮೆರಾಗಳು ತಕ್ಷಣವೇ ಗುರುತಿಸುತ್ತವೆ.
ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ :
ನಿಯಮ ಉಲ್ಲಂಘಿಸಿದ ವಾಹನಗಳ ನಂಬರ್ ಪ್ಲೇಟ್ ಅನ್ನು ಈ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡಿ, ಫೋಟೋ ಸಮೇತ ಉಡುಪಿಯ ಸಂಚಾಲನಾ ನಿಯಂತ್ರಣ ಕೊಠಡಿಗೆ
ರವಾನಿಸುತ್ತವೆ.
ನೇರ ಇ-ಚಲನ್:
ನಿಯಂತ್ರಣ ಕೊಠಡಿಯಿಂದ ನೇರವಾಗಿ ವಾಹನದ ಮಾಲೀಕರ ಮೊಬೈಲ್ ಸಂಖ್ಯೆಗೆ ದಂಡದ ಇ-ಚಲನ್ ಸಂದೇಶ ತಲುಪಲಿದೆ.
ಪೊಲೀಸ್ ಇಲಾಖೆಯ ಮನವಿ:
"ಈ ತಂತ್ರಜ್ಞಾನದ ಮುಖ್ಯ ಉದ್ದೇಶ ಕೇವಲ ದಂಡ ವಿಧಿಸುವುದಲ್ಲ, ಬದಲಾಗಿ ವಾಹನ ಸವಾರರಲ್ಲಿ ಶಿಸ್ತು ಮೂಡಿಸುವುದು ಮತ್ತು ಅಮೂಲ್ಯ ಜೀವಗಳನ್ನು ರಕ್ಷಿಸುವುದಾಗಿದೆ. ಸಾರ್ವಜನಿಕರು ಹೆದ್ದಾರಿಯಲ್ಲಿ ನಿಗದಿಪಡಿಸಿದ ವೇಗದ ಮಿತಿಯನ್ನು ಪಾಲಿಸಿ, ಸುರಕ್ಷಿತವಾಗಿ ಪ್ರಯಾಣಿಸಬೇಕು."
ವಾಹನ ಸವಾರ ಗಮನಿಸಬೇಕಾದ ಅಂಶಗಳು:
ಹೆದ್ದಾರಿಯಲ್ಲಿ ಸಾಗುವಾಗ ಆಯಾ ಪ್ರದೇಶಗಳಲ್ಲಿ ಹಾಕಲಾದ ವೇಗದ ಮಿತಿಯ ಬೋರ್ಡ್ಗಳನ್ನು ಗಮನಿಸಿ ವಾಹನ ಚಲಾಯಿಸಿ.
ನಿಯಮ ಉಲ್ಲಂಘಿಸಿದರೆ ಯಾವುದೇ ಸಿಬ್ಬಂದಿ ನಿಮ್ಮನ್ನು ತಡೆಯದಿದ್ದರೂ, ನಿಮ್ಮ ಮನೆಗೆ ಅಥವಾ ಮೊಬೈಲ್ಗೆ ದಂಡದ ರಸೀದಿ ಬರುವುದು ಗ್ಯಾರಂಟಿ..!
" ನೆನಪಿರಲಿ, ನಿಧಾನವೇ ಪ್ರಧಾನ - ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿ"


