ದುರಂತಕ್ಕೆ ಕಾರಣಗಳೇನು..?
ನಿಯಮಗಳ ಉಲ್ಲಂಘನೆ:
ಆನೆಗಳು ಮತ್ತು ಪ್ರವಾಸಿಗರ ನಡುವೆ ಕನಿಷ್ಠ ಸುರಕ್ಷಿತ ಅಂತರ ಇರಬೇಕೆಂಬ ನಿಯಮವಿದ್ದರೂ, ಪ್ರವಾಸಿಗರಿಗೆ ಆನೆಗಳ ತೀರಾ ಹತ್ತಿರ ಹೋಗಲು, ಮುಟ್ಟಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಮುಕ್ತ ಅವಕಾಶ ನೀಡಲಾಗಿತ್ತು.
ಆನೆಗಳ 'ಮಸ್ತ್' ಸ್ಥಿತಿ ಕಡೆಗಣನೆ:
ಜಗಳವಾಡಿದ 'ಕಂಜನ್' ಮತ್ತು 'ಮಾರ್ತಾಂಡ' ಆನೆಗಳಿಗೆ ಈ ಹಿಂದೆಯೂ ಆಕ್ರಮಣಕಾರಿ ನಡವಳಿಕೆಯ ಇತಿಹಾಸವಿತ್ತು. ಆದರೂ ಇಲಾಖೆಯು ಇವುಗಳನ್ನು ಸಾರ್ವಜನಿಕವಾಗಿ ನದಿಯಲ್ಲಿ ಸ್ನಾನ ಮಾಡಿಸಲು ಒಟ್ಟಿಗೆ ಕರೆತಂದು ದೊಡ್ಡ ನಿರ್ಲಕ್ಷ್ಯ ವಹಿಸಿದೆ.
ಘಟನೆ ನಡೆದಿದ್ದು ಹೇಗೆ?
ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ 'ಕಂಜನ್' ಮತ್ತು 'ಮಾರ್ತಾಂಡ' ಆನೆಗಳ ನಡುವೆ ಭೀಕರ ಕಾಳಗ ನಡೆದಿದೆ. ಕಂಜನ್ ಆನೆ ತಳ್ಳಿದ ರಭಸಕ್ಕೆ ಮಾರ್ತಾಂಡ ಆನೆ ನಿಯಂತ್ರಣ ತಪ್ಪಿ ನದಿಯ ದಂಡೆಯಲ್ಲಿದ್ದ ತಮಿಳುನಾಡಿನ ಪ್ರವಾಸಿ ಮಹಿಳೆ ತುಳಸಿ (33) ಅವರ ಮೇಲೆ ಬಿದ್ದಿದೆ. ಆನೆಯ ಭಾರಕ್ಕೆ ಸಿಲುಕಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಅವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಈಗ ರಾಜ್ಯಾದ್ಯಂತ ಕಠಿಣ ನಿಯಮ ಜಾರಿ.!
100 ಅಡಿ ದೂರ ಕಡ್ಡಾಯ:
ಪ್ರವಾಸಿಗರು ಆನೆಗಳಿಂದ ಕನಿಷ್ಠ 100 ಅಡಿ ದೂರ ನಿಂತು ಮಾತ್ರ ನೋಡಬೇಕು.
ಸಂಪರ್ಕ ನಿಷೇಧ:
ಆನೆಗಳನ್ನು ಮುಟ್ಟುವುದು, ಸೊಂಡಿಲು ಹಿಡಿಯುವುದು ಮತ್ತು ಹತ್ತಿರ ನಿಂತು ಸೆಲ್ಫಿ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸ್ನಾನ ಮತ್ತು ಆಹಾರ ಬಂದ್:
ಪ್ರವಾಸಿಗರು ಆನೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸುವಂತಿಲ್ಲ ಹಾಗೂ ಯಾವುದೇ ಆಹಾರ ನೀಡುವಂತಿಲ್ಲ.
ತಜ್ಞರ ಆಕ್ರೋಶ:
"ಒಂದು ಅಮೂಲ್ಯ ಪ್ರಾಣ ಹೋದ ಮೇಲೆ ಇಲಾಖೆಗೆ ನಿಯಮಗಳ ನೆನಪಾಗಿದೆ. ಮೊದಲೇ ಮುನ್ನೆಚ್ಚರಿಕೆ ವಹಿಸಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು" ಎಂದು ವನ್ಯಜೀವಿ ಸಂರಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


