Public Prime News

CLEAR VISION, TRUE MISSION

ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತ: ಮುಲ್ಕಿ ಮೂಲದ ಮಹಿಳೆ ಸ್ಥಳದಲ್ಲೇ ಸಾವು..!!
kannadanadi

ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತ: ಮುಲ್ಕಿ ಮೂಲದ ಮಹಿಳೆ ಸ್ಥಳದಲ್ಲೇ ಸಾವು..!!

Public Prime News

Public Prime News

Reported by Public Prime News

ಹಾಸನ / ಮುಲ್ಕಿ: 

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ಸಮೀಪದ ಚೌಡೇನಹಳ್ಳಿ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮುಲ್ಕಿ ಮೂಲದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಮೂವರು ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ.


ಮೃತರನ್ನು ಮುಲ್ಕಿ ಕಾರ್ನಾಡ್ ಕೆ.ಎಸ್. ರಾವ್ ನಗರದ ಕೊರಂಟಬೆಟ್ಟು ನಿವಾಸಿ, ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ದಿ.ಶಶಿಕಾಂತ್ ಶೆಟ್ಟಿ ಅವರ ಸಹೋದರಿ ಶಶಿಪ್ರಭಾ (47) ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಗಾಯಗೊಂಡ ಕಾರ್ಕಳ ನಿವಾಸಿ ದಿನೇಶ್ (34), ಮಂಡ್ಯ ನಿವಾಸಿ ಸುಜನ್ (20) ಹಾಗೂ ಕಾರು ಚಾಲಕ ಅಖಿಲ್ (20) ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಅಪಘಾತ ಸಂಭವಿಸಿದ್ದು ಹೇಗೆ..? 

ಮೃತ ಶಶಿಪ್ರಭಾ ಅವರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ಬಳಿ ಹೋಟೆಲ್/ಡಾಬಾ ನಡೆಸುತ್ತಿದ್ದರು. ಭಾನುವಾರ ರಾತ್ರಿ ತಮ್ಮ ಕಾರಿನಲ್ಲಿ (KA 19 MM 4066) ಸ್ವಊರಾದ ಮುಲ್ಕಿಗೆ ಪ್ರಯಾಣಿಸುತ್ತಿದ್ದ ವೇಳೆ, ರಾತ್ರಿ 1:10ರ ಸುಮಾರಿಗೆ ಚೌಡೇನಹಳ್ಳಿ ಬಳಿ ತಲುಪಿದೆ.


ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸತ್ತು ಬಿದ್ದಿದ್ದ ಹಂದಿಯೊಂದನ್ನು ಗಮನಿಸಿದ ಚಾಲಕ ಅಖಿಲ್, ಕಾರನ್ನು ನಿಧಾನಗೊಳಿಸಿ ಬದಿಗೆ ಸರಿಸುತ್ತಿದ್ದರು. ಅದೇ ವೇಳೆ, ಹಿಂಭಾಗದಿಂದ ಅತಿ ವೇಗವಾಗಿ ಬಂದ ಮತ್ತೊಂದು ಫೋರ್ಡ್ ಕಾರು, ರಸ್ತೆಯಲ್ಲಿದ್ದ ಸತ್ತ ಹಂದಿಯ ಮೇಲೆಯೇ ಹರಿದು ನಿಯಂತ್ರಣ ಕಳೆದುಕೊಂಡು ಶಶಿಪ್ರಭಾ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ವೇಗದಲ್ಲೇ ಆ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದೆ.


ಅಪಘಾತದ ರಭಸಕ್ಕೆ ಶಶಿಪ್ರಭಾ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ಭೀಕರ ಸಂಘರ್ಷದಲ್ಲಿ ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ಶಶಿಪ್ರಭಾ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೃತರು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


ಮಾವನ ಜೊತೆ ಮಾತನಾಡಿದ ಅರ್ಧ ಗಂಟೆಯಲ್ಲೇ ಕರಾಳ ಸಾವು!

ಮೃತ ಶಶಿಪ್ರಭಾ ಅವರು ಅತ್ಯಂತ ಕಷ್ಟಪಟ್ಟು ದುಡಿಯುವ ಶ್ರಮಜೀವಿಯಾಗಿದ್ದರು ಮತ್ತು ಅಪಾರ ದೈವಭಕ್ತೆಯಾಗಿದ್ದರು. ಅವರು ದುರಂತ ಸಂಭವಿಸುವುದಕ್ಕೂ ಕೇವಲ ಅರ್ಧ ಗಂಟೆ ಮುಂಚೆಯಷ್ಟೇ ಮುಲ್ಕಿಯ ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿ, ತಮ್ಮ ಮನೆಯಲ್ಲಿ ಧಾರ್ಮಿಕ ಪೂಜೆ ನಡೆಸುವ ಕುರಿತು ಚರ್ಚೆ ನಡೆಸಿದ್ದರು.


ಮಾತನಾಡಿದ ಕೆಲವೇ ಕ್ಷಣಗಳಲ್ಲಿ ಈ ರೀತಿಯ ಆಘಾತಕಾರಿ ಸುದ್ದಿ ಕೇಳಿಬಂದಿರುವುದು ಕುಟುಂಬಸ್ಥರನ್ನು ಹಾಗೂ ಸ್ಥಳೀಯರನ್ನು ತೀವ್ರ ಶೋಕಸಾಗರದಲ್ಲಿ ಮುಳುಗಿಸಿದೆ.


ಈ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಎಬ್ಬಿಸಿ ನಿಲ್ಲಿಸದೆ ಪರಾರಿಯಾಗಿರುವ ಇನ್ನೊಂದು ಕಾರು ಹಾಗೂ ಅದರ ಚಾಲಕನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Share this story