ಕಾರ್ಕಳ:
ನ್ಯಾಯಾಲಯದ ವಿಚಾರನೆಗೆ ಹಾಜರಾಗದೆ ಬರೋಬ್ಬರಿ 36 ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಕೊನೆಗೂ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಕಳ ರಾಮಸಮುದ್ರ ನಿವಾಸಿ ಪೀಟರ್ ಆಗಸ್ಟಿನ್ ಮಾರ್ಟೀಸ್ (60) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಆರೋಪಿ ಪೀಟರ್ ಆಗಸ್ಟಿನ್ ಮಾರ್ಟೀಸ್ ವಿರುದ್ಧ 1989ರ ಅಪರಾಧ ಸಂಖ್ಯೆ 92/1989ರಡಿ ಭಾರತೀಯ ದಂಡ ಸಂಹಿತೆ (IPC) ಕಲಂ 143, 147, 148, 447, 448, 323, 326 ಜೊತೆಗೆ 149ರ ಅಡಿಯಲ್ಲಿ ಗಲಭೆ, ಅಕ್ರಮ ಪ್ರವೇಶ ಹಾಗೂ ಹಲ್ಲೆ ಸೇರಿದಂತೆ ವಿವಿಧ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿದ್ದವು.
ಅಲ್ಲದೆ, ಕಾರ್ಕಳ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಎಲ್.ಪಿ.ಸಿ 14/2004 ಪ್ರಕರಣದಲ್ಲಿ ಕಳೆದ ಮೂರೂವರೆ ದಶಕಗಳಿಂದ ನ್ಯಾಯಾಲಯದ ವಿಚಾರನೆಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದು, ಈತನ ವಿರುದ್ಧ ವಾರಂಟ್ ಜಾರಿಯಲ್ಲಿತ್ತು.
ಯಶಸ್ವಿ ಪೊಲೀಸ್ ಕಾರ್ಯಾಚರಣೆ:
ಖಚಿತ ಮಾಹಿತಿ ಆಧಾರದ ಮೇಲೆ, ಕಾರ್ಕಳ ಉಪ ವಿಭಾಗದ ಉಪಾಧೀಕ್ಷಕರ ಮಾರ್ಗದರ್ಶನ ಹಾಗೂ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಉಡುಪಿ ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕರ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಕಳ ನಗರ ಠಾಣಾ ಉಪನಿರೀಕ್ಷಕ ಮುರಳೀಧರ ನಾಯ್ಕ ಹಾಗೂ ಸಿಬ್ಬಂದಿಯಾದ ಹೆಚ್ಸಿ 2096 ಲೋಕೇಶ್, ಹೆಚ್ಸಿ 83 ಸಂಜಯ್ ಹಾಗೂ ಹೆಚ್ಸಿ 1148 ರಂಜಿತ್ ಶೆಟ್ಟಿ ಅವರನ್ನೊಳಗೊಂಡ ವಿಶೇಷ ತಂಡ ಜುಲೈ 27ರಂದು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದೆ.
ಬಂಧಿತ ಆರೋಪಿಯನ್ನು ಕಾರ್ಕಳ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


