ಕೃಷಿಯಲ್ಲಿ ರೈತರು ಎದುರಿಸುವ ಪ್ರಮುಖ ಸವಾಲುಗಳಲ್ಲಿ ಕಳೆ (Weed) ಸಮಸ್ಯೆ ಕೂಡ ಒಂದು. ಬೆಳೆಗಳಿಗೆ ಹಾಕುವ ಗೊಬ್ಬರ, ನೀರು ಮತ್ತು ಪೋಷಕಾಂಶಗಳನ್ನು ಈ ಕಳೆಗಳೇ ಹೀರಿಕೊಳ್ಳುವುದರಿಂದ ಮುಖ್ಯ ಬೆಳೆಯ ಇಳುವರಿ ಕುಂಠಿತಗೊಳ್ಳುತ್ತದೆ. ಕಳೆಯನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಕಳೆನಾಶಕಗಳನ್ನು ಸಿಂಪಡಿಸುವುದರಿಂದ ಭೂಮಿಯ ಫಲವತ್ತತೆ ಹಾಳಾಗುವುದಲ್ಲದೆ, ಪರಿಸರಕ್ಕೂ ಹಾನಿಯಾಗುತ್ತದೆ. ಹಾಗಾದರೆ, ಯಾವುದೇ ರಾಸಾಯನಿಕ ಬಳಸದೆ ನೈಸರ್ಗಿಕ ಹಾಗೂ ಸರಳ ವಿಧಾನಗಳ ಮೂಲಕ ತೋಟವನ್ನು ಕಳೆ ಮುಕ್ತ ಮಾಡುವುದು ಹೇಗೆ.?
ಅದಕ್ಕಾಗಿ ಇಲ್ಲಿದೆ ಕೆಲವು ಪರಿಣಾಮಕಾರಿ ಸೂತ್ರಗಳು:
1. ಹೊದಿಕೆ ವಿಧಾನ:
ಕಳೆ ನಿಯಂತ್ರಣಕ್ಕೆ ಅತ್ಯಂತ ಸುಲಭ ಮತ್ತು ನೈಸರ್ಗಿಕ ವಿಧಾನವೆಂದರೆ ಮಲ್ಚಿಂಗ್ ಅಥವಾ ಹೊದಿಕೆ ವಿಧಾನ. ಒಣಗಿದ ಎಲೆಗಳು, ತೆಂಗಿನ ಗರಿಗಳು, ಕಬ್ಬಿನ ಸಿಪ್ಪೆ ಅಥವಾ ಮಲ್ಚಿಂಗ್ ಶೀಟ್ಗಳನ್ನು ಬಳಸಿ ಬೆಳೆಗಳ ಸಾಲುಗಳ ಮಧ್ಯೆ ಇರುವ ಖಾಲಿ ಜಾಗವನ್ನು ಮುಚ್ಚಬೇಕು. ಇದರಿಂದ ಸೂರ್ಯನ ಬೆಳಕು ನೇರವಾಗಿ ಭೂಮಿಗೆ ಬೀಳುವುದಿಲ್ಲ. ಬೆಳಕಿನ ಕೊರತೆಯಿಂದಾಗಿ ಕಳೆ ಬೀಜಗಳು ಮೊಳಕೆಯೊಡೆಯಲು ಸಾಧ್ಯವಾಗದೆ ಕಳೆ ಬೆಳವಣಿಗೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ಇದು ಮಣ್ಣಿನಲ್ಲಿ ತೇವಾಂಶವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
2. ಅಂತರ ಬೇಸಾಯ ಮತ್ತು ಹನಿ ನೀರಾವರಿ:
ಗಿಡಗಳ ನಡುವೆ ನಿಯಮಿತವಾಗಿ ಎಡೆಹೊಡೆಯುವುದು ಅಥವಾ ಅಂತರ ಬೇಸಾಯ ಮಾಡುವುದರಿಂದ ಕಳೆಗಳನ್ನು ಆರಂಭಿಕ ಹಂತದಲ್ಲೇ ಬುಡಸಮೇತ ಕಿತ್ತೊಗೆಯಬಹುದು. ಇದರೊಂದಿಗೆ ಸಾಂಪ್ರದಾಯಿಕವಾಗಿ ಇಡೀ ಜಮೀನಿಗೆ ನೀರು ಹರಿಸುವ ಬದಲು, ಹನಿ ನೀರಾವರಿ (Drip Irrigation) ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಹನಿ ನೀರಾವರಿಯಿಂದ ನೀರು ನೇರವಾಗಿ ಮುಖ್ಯ ಬೆಳೆಯ ಬುಡಕ್ಕೆ ಮಾತ್ರ ಸಿಗುವುದರಿಂದ, ಉಳಿದ ಖಾಲಿ ಜಾಗದಲ್ಲಿ ಕಳೆಗಳು ಬೆಳೆಯಲು ತೇವಾಂಶ ಸಿಗದೆ ಒಣಗಿಹೋಗುತ್ತವೆ.
3. ಹೊದಿಕೆ ಬೆಳೆಗಳ ಕೃಷಿ:
ಮುಖ್ಯ ಬೆಳೆಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಹುರುಳಿ, ಅಲಸಂದಿ, ಡಯಾಂಚಾ ಅಥವಾ ಶೇಂಗಾದಂತಹ ಹೊದಿಕೆ ಬೆಳೆಗಳನ್ನು (Cover Crops) ಬೆಳೆಯಬೇಕು. ಇವು ಭೂಮಿಯ ಮೇಲ್ಮೈಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವುದರಿಂದ ಕಳೆಗಳು ಬೆಳೆಯಲು ಜಾಗವಿರುವುದಿಲ್ಲ. ಇಷ್ಟೇ ಅಲ್ಲದೆ, ಈ ದ್ವಿದಳ ಧಾನ್ಯದ ಬೆಳೆಗಳು ಗಾಳಿಯಲ್ಲಿರುವ ಸಾರಜನಕವನ್ನು ಮಣ್ಣಿಗೆ ಸ್ಥಿರೀಕರಿಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತವೆ.


