ಉಡುಪಿ: ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ಮತ್ತು ಅತಿವೇಗವಾಗಿ ವಾಹನ ಚಲಾಯಿಸುವವರನ್ನು ಪತ್ತೆಹಚ್ಚಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ಅಳವಡಿಸಲಾಗಿದ್ದ ಅತ್ಯಾಧುನಿಕ 'ಸ್ಪೀಡ್ ರಾಡಾರ್ ಕ್ಯಾಮೆರಾ' (Speed Radar Camera) ವ್ಯವಸ್ಥೆಯು ಅಧಿಕೃತವಾಗಿ ಇಂದಿನಿಂದ ಕಾರ್ಯಾರಂಭಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಈ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಚಲಿಸುವ ವಾಹನಗಳನ್ನು ನೇರವಾಗಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯಿಂದಲೇ (Control Room) ನಿಗಾವಹಿಸಲಾಗುತ್ತದೆ. ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಿಳಾಸಕ್ಕೆ ಸಂಬಂಧಿಸಿದ ದಂಡದ ಚಲನ್ಗಳನ್ನು ನೇರವಾಗಿ ಅಂಚೆ (Post) ಮೂಲಕ ಕಳುಹಿಸಿಕೊಡಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಕ್ಯಾಮೆರಾ ಎಲ್ಲೆಲ್ಲಿ ಅಳವಡಿಸಲಾಗಿದೆ.?
ಉಡುಪಿ ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಯ ಆರು ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಈ ಹೈಟೆಕ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ:
ಕಾರ್ಕಳ: ದೂಪದ ಕಟ್ಟೆ
ಪಡುಬಿದ್ರಿ: ಉಚ್ಚಿಲ
ಕಾಪು: ದಂಡತೀರ್ಥ
ಕೋಟ: ತೆಕ್ಕಟ್ಟೆ
ಗಂಗೊಳ್ಳಿ: ತ್ರಾಸಿ
ಬೈಂದೂರು: ನಾಯಕನ ಕಟ್ಟೆ
ವೇಗದ ಮಿತಿ (Speed Limit) ಎಷ್ಟು?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ನಿಯಮಗಳಿಗೆ ಅನುಸಾರವಾಗಿ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ:
ಕಾರ್ಕಳದ ದೂಪದಕಟ್ಟೆಯಲ್ಲಿ:
ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದ ಮಿತಿ ಇರಲಿದೆ.
ಉಳಿದ ಐದು ಸ್ಥಳಗಳಲ್ಲಿ:
ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದ ಮಿತಿ ಇರಲಿದೆ.
ಈ ಕ್ಯಾಮೆರಾಗಳು ಯಾವೆಲ್ಲಾ ತಪ್ಪುಗಳನ್ನು ಪತ್ತೆ ಮಾಡುತ್ತವೆ.?
ಕೇವಲ ಅತಿವೇಗ ಮಾತ್ರವಲ್ಲದೆ, ಈ ಕೆಳಗಿನ ಸಂಚಾರ ನಿಯಮ ಉಲ್ಲಂಘನೆಗಳನ್ನೂ ಈ ಕ್ಯಾಮೆರಾಗಳು ನಿಖರವಾಗಿ ಸೆರೆಹಿಡಿಯಲಿವೆ:
1.ಅತಿವೇಗದ ವಾಹನ ಚಾಲನೆ
2.ದ್ವಿಚಕ್ರ ವಾಹನದಲ್ಲಿ ಮೂವರು ಸಂಚರಿಸುವುದು
3.ಸೀಟ್ ಬೆಲ್ಟ್ ಧರಿಸದೆ ಇರುವುದು
4.ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು
5.ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವುದು
6.ಒನ್-ವೇ ಅಥವಾ ತಪ್ಪು ದಿಕ್ಕಿನಲ್ಲಿ ಚಾಲನೆ ಮಾಡುವುದು
ದಂಡ ಪಾವತಿಸುವುದು ಹೇಗೆ.?
ಕ್ಯಾಮೆರಾ ಮೂಲಕ ನಿಯಮ ಉಲ್ಲಂಘನೆ ಪತ್ತೆಯಾಗಿ ಮನೆಗೆ ಚಲನ್ ತಲುಪಿದ ಏಳು (7) ದಿನಗಳ ಒಳಗಾಗಿ ಉಡುಪಿ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗೆ ಭೇಟಿ ನೀಡಿ ದಂಡದ ಮೊತ್ತವನ್ನು ಪಾವತಿಸಬಹುದಾಗಿದೆ.
ಆದ್ದರಿಂದ, ವಾಹನ ಸವಾರರು ರಸ್ತೆಗಿಳಿಯುವ ಮುನ್ನ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷಿತವಾಗಿ ಪ್ರಯಾಣಿಸುವಂತೆ ಹಾಗೂ ದಂಡದಿಂದ ಪಾರಾಗುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.


