ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಜಗಳದ ನಡುವೆ ಸಿಲುಕಿ ಪ್ರವಾಸಿ ಮಹಿಳೆ ಮೃತಪಟ್ಟ ದಾರುಣ ಘಟನೆಯ ಬೆನ್ನಲ್ಲೇ, ಅರಣ್ಯ ಇಲಾಖೆ ಪ್ರವಾಸಿಗರ ಸುರಕ್ಷತೆಗೆ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಹತ್ವದ ಆದೇಶ ಹೊರಡಿಸಿದ್ದಾರೆ.
ಪ್ರಮುಖ 4 ಹೊಸ ನಿಯಮಗಳು:
ಓಪನ್ ಜೀಪ್ ಸಫಾರಿ ನಿಷೇಧ:
ಬಂಡೀಪುರ, ನಾಗರಹೊಳೆ ಸೇರಿದಂತೆ ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮುಕ್ತ ಜೀಪ್ ಸಫಾರಿ ಬ್ಯಾನ್ ಮಾಡಲಾಗಿದೆ. ಇನ್ಮುಂದೆ ಕೇವಲ ಸುರಕ್ಷಿತ ಮುಚ್ಚಿದ ಬಸ್ಗಳಿಗಷ್ಟೇ ಅವಕಾಶ. ತಾತ್ಕಾಲಿಕವಾಗಿ ಜೀಪ್ಗಳಿಗೆ ಕಬ್ಬಿಣದ ಗ್ರಿಲ್ ಅಳವಡಿಸುವುದು ಕಡ್ಡಾಯ.
100 ಅಡಿ ಸುರಕ್ಷಿತ ಅಂತರ:
ಆನೆ ಶಿಬಿರಗಳಲ್ಲಿ ಪ್ರವಾಸಿಗರು ಆನೆಗಳಿಂದ ಕನಿಷ್ಠ 100 ಅಡಿ ದೂರವಿರಬೇಕು. ಆನೆ ಮುಟ್ಟುವುದು, ಸೆಲ್ಫಿ ತೆಗೆಯುವುದು, ಸ್ನಾನ ಮಾಡಿಸುವುದು ಮತ್ತು ಆಹಾರ ನೀಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಆಂಬುಲೆನ್ಸ್ ವ್ಯವಸ್ಥೆ:
ತುರ್ತು ಚಿಕಿತ್ಸೆಗಾಗಿ ಎಲ್ಲಾ ಸಫಾರಿ ಕೇಂದ್ರ ಹಾಗೂ ಆನೆ ಶಿಬಿರಗಳ ಬಳಿ ಕಾಯಂ ಆಗಿ ಆಂಬುಲೆನ್ಸ್ ಮತ್ತು ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಲಿದೆ.
'ಕಾಂಚನ' ದಸರಾದಿಂದ ಔಟ್:
ಮಹಿಳೆಯ ಸಾವಿಗೆ ಕಾರಣವಾದ ಜಗಳದಲ್ಲಿದ್ದ ಪುಂಡಾನೆ 'ಕಾಂಚನ'ನನ್ನು ಮೈಸೂರು ದಸರಾ ಜಂಬೂ ಸವಾರಿಯಿಂದ ಕೈಬಿಡಲಾಗಿದೆ.
ಯಾವುದೇ ಕಾರಣಕ್ಕೂ ಸಫಾರಿ ವೇಳೆ ಪ್ರವಾಸಿಗರು ವಾಹನದಿಂದ ಕೆಳಗಿಳಿಯುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಗ್ಯಾರಂಟಿ.


