ಉಡುಪಿ:
ನಗರದ ಕಿನ್ನಿಮುಲ್ಕಿಯಿಂದ ಅಂಬಲಪಾಡಿವರೆಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಅಕ್ರಮ ಹಾಗೂ ಅಸಮರ್ಪಕ ನಿಲುಗಡೆಯಿಂದಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೀವ್ರ ಸ್ವರೂಪದ ತೊಂದರೆ ಉಂಟಾಗಿದೆ.
ದಟ್ಟಣೆಯ ಗೂಡಾದ ಸರ್ವಿಸ್ ರಸ್ತೆ:
ಈ ಪ್ರದೇಶವು ಸದಾ ಭಾರೀ ವಾಹನಗಳ ಸಂಚಾರದಿಂದ ಕೂಡಿರುತ್ತದೆ. ಆದರೆ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುವುದರಿಂದ ದೊಡ್ಡ ವಾಹನಗಳು ಸುಲಭವಾಗಿ ಸಂಚರಿಸಲು ಸಾಧ್ಯವಾಗದೆ ಪದೇಪದೇ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಿವೆ.
ಮುಚ್ಚಿದ ಮೀನು ಮಾರುಕಟ್ಟೆ ಪ್ರವೇಶ ದ್ವಾರ:
ಪ್ರತಿದಿನ ಜನಸಂದಣಿಯಿಂದ ಕೂಡಿರುವ ಮೀನು ಮಾರುಕಟ್ಟೆಯ ಪ್ರವೇಶ ದ್ವಾರದ ಮುಂದೆಯೇ ದ್ವಿಚಕ್ರ ವಾಹನಗಳನ್ನು ಅಸಮರ್ಪಕವಾಗಿ ನಿಲ್ಲಿಸುತ್ತಿರುವುದರಿಂದ ಆ ದ್ವಾರವೇ ಸಂಪೂರ್ಣವಾಗಿ ಮುಚ್ಚಿಹೋಗುವಂತಾಗಿದೆ. ಇದು ಪಾದಚಾರಿಗಳು ಹಾಗೂ ವಾಹನ ಸವಾರರ ಓಡಾಟಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಮಸ್ಯೆಯಿಂದ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದ್ದು, ಸಂಬಂಧಪಟ್ಟ ಇಲಾಖೆಯವರು ಕೂಡಲೇ ಎಚ್ಚೆತ್ತುಕೊಂಡು ಅಸ್ತವ್ಯಸ್ತ ಪಾರ್ಕಿಂಗ್ಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


