ಕಾರ್ಕಳ:
ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಕ್ಷೇತ್ರದ ಎರಡು ಪ್ರಮುಖ ಸೇತುವೆ ಹಾಗೂ ಕಾಲುಸಂಕಗಳ ನಿರ್ಮಾಣಕ್ಕಾಗಿ ಒಟ್ಟು ರೂ. 2.05 ಕೋಟಿ ವಿಶೇಷ ಅನುದಾನ ಮಂಜೂರಾಗಿದೆ ಎಂದು ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳು ಹಾಗೂ ಗ್ರಾಮೀಣ ಭಾಗದ ಜನರಿಗೆ ದಶಕಗಳ ಬೇಡಿಕೆಯಾಗಿದ್ದ ಈ ಸೇತುವೆಗಳ ನಿರ್ಮಾಣದಿಂದ ಸಂಚಾರ ವ್ಯವಸ್ಥೆ ಮತ್ತಷ್ಟು ಸುಲಭವಾಗಲಿದೆ.
ಎಲ್ಲಿ, ಯಾವ ಕಡೆ ನಿರ್ಮಾಣವಾಗಲಿದೆ ಸೇತುವೆ..?
ಮಂಜೂರಾಗಿರುವ ಒಟ್ಟು 2.05 ಕೋಟಿ ರೂ. ಅನುದಾನದ ಮೂಲಕ ನಿರ್ಮಾಣಗೊಳ್ಳಲಿರುವ ಎರಡು ಪ್ರಮುಖ ಕಾಮಗಾರಿಗಳ ವಿವರಗಳು ಇಲ್ಲಿವೆ:
ನಾಡಾಲು ಗ್ರಾಮ:
ಹೆಬ್ರಿ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ನಾಡಾಲು ಗ್ರಾಮದ ಬಡಾ ತಿಂಗಳೆ-ತಿಂಗಳೆ ಗರಡಿ ಬಳಿ ಹೊಸ ಸೇತುವೆ ನಿರ್ಮಾಣವಾಗಲಿದೆ.
ಈದು ಗ್ರಾಮ:
ಕಾರ್ಕಳ ತಾಲೂಕು ಈದು ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರಲ್ ಬೆಟ್ಟು ಪೂಂಜಾಜೆ
ಕಾವೆರಡ್ಕ ಎಂಬಲ್ಲಿ ನೂತನ ಸೇತುವೆ/ಕಾಲುಸಂಕ ತಲೆ ಎತ್ತಲಿದೆ.
ಶಾಸಕರ ನಿರಂತರ ಪ್ರಯತ್ನಕ್ಕೆ ಸಿಕ್ಕ ಫಲ:
ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ಈ ಸೇತುವೆಗಳ ಮತ್ತು ಕಾಲುಸಂಕಗಳ ನಿರ್ಮಾಣ ಅತ್ಯಗತ್ಯವಾಗಿತ್ತು. ಈ ಕುರಿತು ಶಾಸಕ ವಿ. ಸುನಿಲ್ ಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಇಲಾಖಾ ಸಚಿವರಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಪತ್ರ ಮುಖೇನ ತೀವ್ರ ಮನವಿ ಸಲ್ಲಿಸಿದ್ದರು.
ಶಾಸಕರ ಈ ನಿರಂತರ ಪ್ರಯತ್ನ ಮತ್ತು ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ಇದೀಗ 2.05 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ.
ಶೀಘ್ರದಲ್ಲೇ ಕಾಮಗಾರಿ ಆರಂಭ:
ಅನುದಾನ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವಾಗಿ ಎಲ್ಲಾ ಇಲಾಖಾ ಪ್ರಕ್ರಿಯೆಗಳು ಮತ್ತು ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕಾಮಗಾರಿಗಳನ್ನು ವಿಳಂಬವಿಲ್ಲದೆ ಆರಂಭಿಸಲಾಗುವುದು ಎಂದು ಶಾಸಕ ವಿ. ಸುನಿಲ್ ಕುಮಾರ್ ತಮ್ಮ ಪ್ರಕಟಣೆಯಲ್ಲಿ ಭರವಸೆ ನೀಡಿದ್ದಾರೆ.


