ಕಾರ್ಕಳ:
ಸಾಣೂರು ಹೊಸಸೇತುವೆ ಬಳಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ವಿಭಾಜಕದ (ಡಿವೈಡರ್) ರಿಪ್ಲೆಕ್ಟರ್ ಧ್ವಂಸಗೊಂಡಿದ್ದು, ಇದು ಭಾರೀ ಅಪಘಾತಗಳಿಗೆ ಆಹ್ವಾನ ನೀಡುವಂತಿದೆ ಎಂದು ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಿಳಂಬ ಧೋರಣೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಅಪಾಯಕ್ಕೆ ಕಾರಣವೇನು.?
ಕಳೆದ ಒಂದು ವಾರಗಳಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಗುತ್ತಿಗೆದಾರರು ಸಾಣೂರು ಹೊಸ ಸೇತುವೆಯ ಮೇಲೆ ಡಾಮರಿಕರಣ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ, ಹೆದ್ದಾರಿಯ ಒಂದೇ ಬದಿಯಲ್ಲಿ ಎರಡು ಕಡೆಯ ವಾಹನಗಳು ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಸಾಣೂರು ರಾಮಮಂದಿರದ ಎದುರು ಮೀಡಿಯನ್ ಓಪನಿಂಗ್ (ರಸ್ತೆ ವಿಭಾಜಕ) ಇದ್ದು, ಎರಡು ಬದಿಯ ವಾಹನಗಳು ರಸ್ತೆ ಬದಲಿಸಲು ಇದೇ ವಿಭಾಜಕವನ್ನು ಬಳಸಬೇಕಾದ ಅನಿವಾರ್ಯತೆ ಇದೆ.
ಈ ವೇಳೆ ವಾಹನವೊಂದು ರಸ್ತೆ ವಿಭಾಜಕಕ್ಕೆ ಅಡ್ಡವಾಗಿ ಇಟ್ಟಿದ್ದ ಡಿವೈಡರ್ ಮತ್ತು ರಿಪ್ಲೆಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಅವು ಸಂಪೂರ್ಣವಾಗಿ ಧ್ವಂಸಗೊಂಡಿವೆ.
ಸಾರ್ವಜನಿಕರ ಹಾಗೂ ಹೋರಾಟ ಸಮಿತಿಯ ಎಚ್ಚರಿಕೆ
ಹೆದ್ದಾರಿ ಗುತ್ತಿಗೆದಾರರು ಕೂಡಲೇ ಸಾಣೂರು ಸೇತುವೆ ಮೇಲಿನ ಡಾಮರೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿ, ರಸ್ತೆಯ ಎರಡು ಬದಿಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಸಾಣೂರಿನಲ್ಲಿ ಸರಣಿ ಅಪಘಾತಗಳು ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಈಗ ಸಂಭವಿಸಿರುವ ಮತ್ತು ಮುಂದಾಗುವ ಎಲ್ಲಾ ಅನಾಹುತಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಸಡ್ಡೆಯೇ ನೇರ ಕಾರಣ ಎಂದು ಸಾಣೂರು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯಲ್ಲಿ ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಮುಂದಿನ ವಾರ ಸಾಣೂರಿನ ನಾಗರಿಕರೆಲ್ಲರೂ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದಾರೆ.


