ಬೆಂಗಳೂರು:
ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಐತಿಹಾಸಿಕ ಹಾಗೂ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ದೀರ್ಘಕಾಲದಿಂದ ನಿಷೇಧಗೊಂಡಿದ್ದ ವಿದ್ಯಾರ್ಥಿ ಚುನಾವಣೆಗಳ ಮರುಆರಂಭಕ್ಕೆ ಸಂಪುಟ ಅಸ್ತು ಎಂದಿದ್ದು, ಇದರೊಂದಿಗೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆಗಳನ್ನು ಘೋಷಿಸಲಾಗಿದೆ. ಸಭೆಯ ಬಳಿಕ ಡಿಸಿಎಂ ಡಾ. ಜಿ. ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿ ಈ ಪ್ರಮುಖ ನಿರ್ಣಯಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.
1. ಕಾಲೇಜುಗಳಲ್ಲಿ ಮತ್ತೆ ವಿದ್ಯಾರ್ಥಿ ಚುನಾವಣೆ ಜಾರಿ
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು, ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತೆ ವಿದ್ಯಾರ್ಥಿ ಚುನಾವಣೆಗಳನ್ನು ನಡೆಸಲು ಕ್ಯಾಬಿನೆಟ್ ಅಧಿಕೃತ ಅನುಮೋದನೆ ನೀಡಿದೆ.
2026-27ನೇ ಶೈಕ್ಷಣಿಕ ಸಾಲಿನಿಂದಲೇ ಇದು ಜಾರಿಗೆ ಬರಲಿದೆ.
ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಅಥವಾ ಹೊರಗಿನ ರಾಜಕೀಯ ಸಂಘಟನೆಗಳು ನೇರವಾಗಿ ರಾಜಕೀಯ ಪ್ರಚಾರ ಮಾಡುವಂತಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಿನ ನಿಯಮ ವಿಧಿಸಿದೆ.
2. ಉದ್ಯೋಗ ನಿಧಿ ಹಾಗೂ ಹೊಸ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ
ರಾಜ್ಯದ 10 ಜಿಲ್ಲೆಗಳಲ್ಲಿ ನಿರುದ್ಯೋಗ ನಿವಾರಣೆ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು ನೀಡಲಾಗಿದೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಕೈಗಾರಿಕೆಗಳು ಹಾಗೂ ಸಂಸ್ಥೆಗಳಿಗೆ ಪ್ರತಿ ಉದ್ಯೋಗಿಯ ಆಧಾರದ ಮೇಲೆ ಎರಡು ವರ್ಷಗಳ ಕಾಲ ತಿಂಗಳಿಗೆ ₹2,500 ಪ್ರೋತ್ಸಾಹ ಧನ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
3. ಕರ್ನಾಟಕ ಏರೋಸ್ಪೇಸ್ ಪಾಲಿಸಿ 2026-31 ಕ್ಕೆ ಒಪ್ಪಿಗೆ
ರಾಜ್ಯವನ್ನು ಏರೋಸ್ಪೇಸ್, ರಕ್ಷಣೆ ಮತ್ತು ವಿಮಾನಯಾನ ಉತ್ಪಾದನೆಯ ಪ್ರಮುಖ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನೂತನ 'ಕರ್ನಾಟಕ ಏರೋಸ್ಪೇಸ್ ಪಾಲಿಸಿ 2026-31' ನೀತಿಗೆ ಸಂಪುಟ ಅಸ್ತು ಎಂದಿದೆ.
ಮುಂದಿನ 5 ವರ್ಷಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದು.
ಒಟ್ಟು ₹60,000 ಕೋಟಿ ಹೂಡಿಕೆ ಹಾಗೂ 60,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಬೃಹತ್ ಗುರಿ ಹೊಂದಲಾಗಿದೆ. ಹೆಚ್ಎಎಲ್ (HAL) ವಲಯದಲ್ಲಿ 40 ಫೈಟರ್ ಜೆಟ್ಗಳ ಉತ್ಪಾದನಾ ಯೋಜನೆಗೂ ಸರ್ಕಾರ ಬೆಂಬಲ ನೀಡಲಿದ್ದು, ಹೂಡಿಕೆದಾರರಿಗೆ ಆಕರ್ಷಕ ಸಬ್ಸಿಡಿ ಸೌಲಭ್ಯಗಳು ಸಿಗಲಿವೆ.
4. ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ಹಾಗೂ ಡ್ರೋನ್ ತಂತ್ರಜ್ಞಾನ
ಟೆಲಿ ಐಸಿಯು & ಎಕ್ಸ್-ರೇ ಉನ್ನತೀಕರಣ:
ರಾಜ್ಯದ 182 ಕಡೆಗಳಲ್ಲಿ ₹10 ಕೋಟಿ ವೆಚ್ಚದಲ್ಲಿ 'ಟೆಲಿ ಐಸಿಯು' ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಜೊತೆಗೆ, 'ಕರ್ನಾಟಕ ಡಿಜಿಟಲ್ ರೇಡಿಯೋಗ್ರಫಿ ಮಿಷನ್ ಹಂತ-1'ರ ಅಡಿಯಲ್ಲಿ ₹40.50 ಕೋಟಿ ವೆಚ್ಚದಲ್ಲಿ 162 ಎಕ್ಸ್-ರೇ ಘಟಕಗಳನ್ನು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಗೆ ಮೇಲ್ದರ್ಜೆಗೇರಿಸಲಾಗುತ್ತದೆ.
ಡ್ರೋನ್ ಟೆಕ್ನಾಲಜಿ ಸೆಂಟರ್:
ಭವಿಷ್ಯದ ತಂತ್ರಜ್ಞಾನಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಚಿಕ್ಕಬಳ್ಳಾಪುರದಲ್ಲಿ ₹42.83 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ 'ಡೋನ್ ಟೆಕ್ನಾಲಜಿ ಫೆಸಿಲಿಟಿ ಸೆಂಟರ್' ಸ್ಥಾಪನೆಗೆ ಹಸಿರು ನಿಶಾನೆ ತೋರಲಾಗಿದೆ.
ಸರ್ಕಾರದ ಈ ದಿಟ್ಟ ನಿರ್ಧಾರಗಳು ರಾಜ್ಯದ ಯುವಜನತೆ, ಶಿಕ್ಷಣ ವಲಯ ಹಾಗೂ ಕೈಗಾರಿಕಾ ರಂಗಕ್ಕೆ ಹೊಸ ಚೈತನ್ಯ ತುಂಬುವ ನಿರೀಕ್ಷೆಯಿದೆ.


