ಬೆಳಗಾವಿ:
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.
ಅಬಕಾರಿ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ನಿವಾಸ ಸೇರಿದಂತೆ ಬೆಳಗಾವಿ, ಬೆಂಗಳೂರು ಮತ್ತು ಮಹಾರಾಷ್ಟ್ರದ ಹಲವೆಡೆ ಇ.ಡಿ ಅಧಿಕಾರಿಗಳು ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಇ.ಡಿ ದಾಳಿಗೆ ಕಾರಣವೇನು..?
ಈ ಹಿಂದೆ ಸಚಿವ ಜಾರಕಿಹೊಳಿ ಅವರ ಸಂಬಂಧಿ ಹಾಗೂ ಅಬಕಾರಿ ಆಯುಕ್ತ ಮಂಜುನಾಥ್ ಅವರಿಗೆ ಸೇರಿದ ಸ್ಥಳಗಳ ಮೇಲೆ ಇ.ಡಿ ದಾಳಿ ನಡೆಸಿತ್ತು. ಈ ತನಿಖೆಯ ಮುಂದುವರಿದ ಭಾಗವಾಗಿ ಹಾಗೂ ಹೊಸ ಸಾಕ್ಷ್ಯಗಳ ಆಧಾರದ ಮೇಲೆ ಇಂದು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸೇರಿದ ಒಟ್ಟು 15 ಸ್ಥಳಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ಆರಂಭವಾಗಿದೆ.
ಸಚಿವರ ಮೇಲಿರುವ ಗಂಭೀರ ಆರೋಪಗಳು:
ಅನಧಿಕೃತ ಬಾರ್ ಲೈಸೆನ್ಸ್:
ಸುಮಾರು 18 ಅನಧಿಕೃತ ಬಾರ್ ಲೈಸೆನ್ಸ್ಗಳನ್ನು ನೀಡಲು ಕಾನೂನುಬಾಹಿರವಾಗಿ ನೆರವು ನೀಡಿದ್ದಾರೆ ಎಂಬ ಆರೋಪ ಸಚಿವರ ಮೇಲಿದೆ.
ವಿದೇಶಿ ಹಣ ಅಕ್ರಮ ವರ್ಗಾವಣೆ:
ಪ್ರಕರಣದಲ್ಲಿ ಅಕ್ರಮ ವಿದೇಶಿ ಹೂಡಿಕೆ ಹಾಗೂ ಮನಿ ಲ್ಯಾಂಡರಿಂಗ್ (ಹಣ ಅಕ್ರಮ ವರ್ಗಾವಣೆ) ನಡೆದಿರುವ ಬಲವಾದ ಶಂಕೆ ವ್ಯಕ್ತವಾಗಿದೆ.
₹3 ಕೋಟಿ ಅಕ್ರಮ ಹಣದ ಲಿಂಕ್:
ಹಿಂದೆ ಪತ್ತೆಯಾಗಿದ್ದ ಸುಮಾರು ₹3 ಕೋಟಿ ಅಕ್ರಮ ವಿದೇಶಿ ಹಣದ ಪ್ರಕರಣವೂ ಈ ತನಿಖೆಯ ವ್ಯಾಪ್ತಿಯಲ್ಲಿದ್ದು, ಇ.ಡಿ ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.
ರಾಜ್ಯದ ಹಿರಿಯ ಸಚಿವರೊಬ್ಬರ ನಿವಾಸದ ಮೇಲೆ ಇ.ಡಿ ದಿಢೀರ್ ದಾಳಿ ನಡೆಸಿರುವುದು ಆಡಳಿತಾರೂಢ ಕಾಂಗ್ರೆಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ತನಿಖೆಯ ನಂತರ ಮತ್ತಷ್ಟು ಸ್ಪಷ್ಟ ಮಾಹಿತಿ ಹೊರಬೀಳಬೇಕಿದೆ.


