ಕೃಷ್ಣಾಪುರದಿಂದ ಬೆಂಗ್ರೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಮಗುಚಿಬಿದ್ದ ಪರಿಣಾಮ 10 ತಿಂಗಳ ಹಸುಗೂಸು ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ವೃದ್ಧೆಯೊಬ್ಬರ ಬಲಗೈ ಹೆಬ್ಬೆರಳು ತುಂಡಾಗಿರುವ ದಾರುಣ ಘಟನೆ ಸೆಪ್ಟೆಂಬರ್ 9 ರಂದು ಬೆಂಗ್ರೆ ಸೂಪರ್ ಸ್ಟಾರ್ ಗ್ರೌಂಡ್ ಬಳಿ ಸಂಭವಿಸಿದೆ.
ಅಪಘಾತ ಸಂಭವಿಸಿದ ಆಟೋ ರಿಕ್ಷಾದಲ್ಲಿ ಜೋಹರಾ (68), ಅವರ ಪುತ್ರಿ ಸಪ್ನಾಜ್ (33) ಹಾಗೂ ಮೊಮ್ಮಕ್ಕಳಾದ ಮಹಮ್ಮದ್ ಸಲ್ವಾನ್ (4) ಮತ್ತು 10 ತಿಂಗಳ ಹಸುಗೂಸು ಮಹಮ್ಮದ್ ಶೆಹಾಜಾನ್ ಪ್ರಯಾಣಿಸುತ್ತಿದ್ದರು.
ರಿಕ್ಷಾ ಚಾಲಕ ಅಬ್ದುಲ್ ಅಜೀಜ್ ಅವರ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ನೇರ ಕಾರಣ ಎಂದು ಆರೋಪಿಸಲಾಗಿದೆ. ರಿಕ್ಷಾ ಏಕಾಏಕಿ ಪಲ್ಟಿಯಾದ ರಭಸಕ್ಕೆ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ 68 ವರ್ಷದ ಜೋಹರಾ ಅವರ ಬಲಗೈ ಹೆಬ್ಬೆರಳು ಸಂಪೂರ್ಣವಾಗಿ ತುಂಡಾಗಿದ್ದು, ಸಪ್ನಾಜ್ ಅವರ ತಲೆಯ ಹಿಂಭಾಗಕ್ಕೆ ತೀವ್ರ ಪೆಟ್ಟಾಗಿದೆ. ಇನ್ನು ರಿಕ್ಷಾ ಚಾಲಕ ಅಬ್ದುಲ್ ಅಜೀಜ್ ಕೂಡ ಬಲಗೈ ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ.
ಈ ದುರ್ಘಟನೆಯ ಕುರಿತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಚಾಲಕನ ವಿರುದ್ಧ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


