Public Prime News

CLEAR VISION, TRUE MISSION

ಸೆಪ್ಟೆಂಬರ್ 11ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ: ನಾಲ್ಕು ದಿನ ವಹಿವಾಟು ಬಂದ್ ಸಾಧ್ಯತೆ
national-news

ಸೆಪ್ಟೆಂಬರ್ 11ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ: ನಾಲ್ಕು ದಿನ ವಹಿವಾಟು ಬಂದ್ ಸಾಧ್ಯತೆ

Public Prime News

Public Prime News

Reported by Public Prime News

ನವದೆಹಲಿ: 

ಪಿಂಚಣಿ ಸಂಬಂಧಿತ ಪ್ರಮುಖ ಸಮಸ್ಯೆಗಳು, ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಯೋಜನೆ ಹಾಗೂ ಬಹುಕಾಲದ ಬೇಡಿಕೆಯಾದ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆಯ ಮೇರೆಗೆ ಸೆಪ್ಟೆಂಬರ್ 11ರಂದು ದೇಶಾದ್ಯಂತ ಬೃಹತ್ ಬ್ಯಾಂಕ್ ಮುಷ್ಕರ ನಡೆಯಲಿದೆ. ಈ ಮುಷ್ಕರದಿಂದಾಗಿ ವಿಶೇಷವಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.


 ಸತತ ನಾಲ್ಕು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗೆ ಸಂಚಕಾರ

ಮುಷ್ಕರವು ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರಲಿದೆ:

ಸೆಪ್ಟೆಂಬರ್ 11 (ಶುಕ್ರವಾರ): 

ಬ್ಯಾಂಕ್ ನೌಕರರ ರಾಷ್ಟ್ರವ್ಯಾಪಿ ಮುಷ್ಕರ


ಸೆಪ್ಟೆಂಬರ್ 12 & 13:

ಶನಿವಾರ ಮತ್ತು ಭಾನುವಾರ ವಾರಾಂತ್ಯದ ರಜೆ.


ಸೆಪ್ಟೆಂಬರ್ 14 (ಸೋಮವಾರ): 

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ಹೀಗಾಗಿ, ಮುಷ್ಕರ ಯಶಸ್ವಿಯಾದರೆ ಕೆಲವು ಪ್ರದೇಶಗಳಲ್ಲಿ ಸತತ ನಾಲ್ಕು ದಿನಗಳವರೆಗೆ ಬ್ಯಾಂಕಿಂಗ್ ವಹಿವಾಟುಗಳು ಸಂಪೂರ್ಣಸ್ತಬ್ಧಗೊಳ್ಳುವ ಆತಂಕ ಎದುರಾಗಿದೆ.

ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳೇನು..?


ಐದು ದಿನಗಳ ಬ್ಯಾಂಕಿಂಗ್ ಜಾರಿ:

2024ರ ಮಾರ್ಚ್ 8ರಂದು ಸಹಿ ಹಾಕಲಾದ 12ನೇ ದ್ವಿಪಕ್ಷೀಯ ಒಪ್ಪಂದದ ಪ್ರಕಾರ, ವಾರದಲ್ಲಿ 5 ದಿನಗಳ ಕೆಲಸದ ವ್ಯವಸ್ಥೆಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಒಪ್ಪಿಗೆ ಸೂಚಿಸಿತ್ತು. ದಿನದ ಕೆಲಸದ ಅವಧಿಯನ್ನು 40 ನಿಮಿಷ ಹೆಚ್ಚಿಸಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಬ್ಯಾಂಕ್‌ಗಳನ್ನು ನಡೆಸುವ ಈ ಪ್ರಸ್ತಾವನೆ ಕಳೆದ ಎರಡು ವರ್ಷಗಳಿಂದ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿದೆ.


ಪಿಂಚಣಿ ಸಮಸ್ಯೆಗಳು:

ಪಿಂಚಣಿ ಪರಿಷ್ಕರಣೆ, ಎಲ್ಲ ಪಿಂಚಣಿದಾರರಿಗೆ ಸಮಾನ ತುಟ್ಟಿಭತ್ಯೆ (DA) ಸೂತ್ರ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿಯಲ್ಲಿ (NPS) ಬರುವ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ (OPS) ಮರಳಲು ಅವಕಾಶ ಕಲ್ಪಿಸುವುದು.


ಪ್ರೋತ್ಸಾಹಕ ಯೋಜನೆ (PLI) ವಿವಾದ: 

ಹಿರಿಯ ಅಧಿಕಾರಿಗಳ ಪ್ರೋತ್ಸಾಹಕ ಯೋಜನೆಗೆ ಸಂಬಂಧಿಸಿದಂತೆ ಏಕಪಕ್ಷೀಯ ಧೋರಣೆ ಅನುಸರಿಸುತ್ತಿರುವುದನ್ನು ಒಕ್ಕೂಟ ವಿರೋಧಿಸಿದೆ.

ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ

ದೇಶದ 9 ಪ್ರಮುಖ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಸಂಘಟನೆಗಳ ಒಕ್ಕೂಟವಾಗಿರುವ UFBU, ಸರ್ಕಾರದ ಧೋರಣೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದೆ:

ಸೆಪ್ಟೆಂಬರ್ 28ರಿಂದ 30ರವರೆಗೆ: 

ಮೂರು ದಿನಗಳ ಕಾಲ ದೇಶವ್ಯಾಪಿ ಮುಷ್ಕರ.


ಅಕ್ಟೋಬರ್ 26ರಿಂದ: 

ಸರ್ಕಾರದ ಕಡೆಯಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಒಕ್ಕೂಟ ಎಚ್ಚರಿಕೆ ನೀಡಿದೆ

ಗ್ರಾಹಕರಿಗೆ ಸಲಹೆ:

ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಮಾಡಬೇಕಾದ ಪ್ರಮುಖ ಕೆಲಸಗಳನ್ನು (ಹಣ ಜಮಾ, ಚೆಕ್ ಕ್ಲಿಯರೆನ್ಸ್, ಕೆವೈಸಿ ಮುಂತಾದವು) ಮುಂಚಿತವಾಗಿ ಪೂರ್ಣಗೊಳಿಸುವುದು ಉತ್ತಮ. ತುರ್ತು ಸೇವೆಗಳಿಗಾಗಿ ಎಟಿಎಂ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಳ್ಳುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ.

Share this story