ಬೆಂಗಳೂರು:
ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಪ್ರಮುಖ ಆರೋಪಿ (A1) ಪವಿತ್ರಾ ಗೌಡ ಅವರಿಗೆ ಕಾನೂನು ಹೋರಾಟದಲ್ಲಿ ತಾತ್ಕಾಲಿಕ ನಿರಾಳತೆ ದೊರೆತಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎದುರಾಗಿದ್ದ ತೀವ್ರ ಆರೋಗ್ಯ ಸಮಸ್ಯೆ ಹಾಗೂ ವಸತಿ ದಟ್ಟಣೆಯಿಂದ ಮುಕ್ತಿ ಪಡೆಯಲು ಅವರು ನಡೆಸಿದ ಪ್ರಯತ್ನಕ್ಕೆ ನ್ಯಾಯಾಲಯದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ಪವಿತ್ರಾ ಗೌಡ ಸಲ್ಲಿಸಿದ್ದ ಬ್ಯಾರಕ್ ಬದಲಾವಣೆ ಅರ್ಜಿಯನ್ನು ವಿಚಾರಣೆ ನಡೆಸಿದ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ಜೈಲು ಅಧಿಕಾರಿಗಳಿಗೆ ಮಹತ್ವದ ನಿರ್ದೇಶನಗಳನ್ನು ನೀಡಿದೆ.
ಕೋರ್ಟ್ ಆದೇಶದಲ್ಲೇನಿದೆ..?
ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಪೀಠ, ಆರೋಪಿಯ ಆರೋಗ್ಯದ ಹಿತದೃಷ್ಟಿಯನ್ನು ಗಂಭೀರವಾಗಿ ಪರಿಗಣಿಸಿದೆ.
ಬ್ಯಾರಕ್ ಬದಲಾವಣೆ ಕೋರಲು ಅಸಲಿ ಕಾರಣವೇನು.?
ಪವಿತ್ರಾ ಗೌಡ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಜೈಲಿನ ಒಳಗೆ ಮಹಿಳಾ ಕೈದಿಗಳು ಎದುರಿಸುತ್ತಿರುವ ಅಸಹನೀಯ ವಾತಾವರಣದ ಕರಾಳ ಚಿತ್ರಣವನ್ನು ಬಿಚ್ಚಿಟ್ಟಿದ್ದರು.
ಅತಿಯಾದ ದಟ್ಟಣೆ:
ಕೇವಲ 20 ಮಹಿಳಾ ಕೈದಿಗಳ ಸಾಮರ್ಥ್ಯವಿರುವ ಸೆಲ್ನಲ್ಲಿ 30ಕ್ಕೂ ಹೆಚ್ಚು ಮಂದಿಯನ್ನು ಕೂರಿಸಲಾಗಿದೆ. ಇದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ.
ನಿದ್ರಾಹೀನತೆ ಹಾಗೂ ಗದ್ದಲ:
ಜೊತೆಯಲ್ಲಿರುವ ಇತರೆ ಕೈದಿಗಳಿಂದ ರಾತ್ರಿ ವೇಳೆ ನಿರಂತರ ಗದ್ದಲ ಉಂಟಾಗುತ್ತಿದ್ದು, ನಿದ್ದೆಗೆ ತೀವ್ರ ಭಂಗ ಬರುತ್ತಿದೆ.
ಆರೋಗ್ಯ ಕ್ಷೀಣತೆ:
ನಿದ್ರಾಹೀನತೆಯಿಂದಾಗಿ ಪವಿತ್ರಾ ಗೌಡ ಅವರು ತೀವ್ರ ತಲೆನೋವು, ಮಾನಸಿಕ ಒತ್ತಡ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ.
ಅಲ್ಲದೆ, ಮೂಲಸೌಕರ್ಯಗಳ ಕೊರತೆಯಿಂದ ಚರ್ಮದ ಅಲರ್ಜಿ ಹಾಗೂ ಸೋಂಕಿನ ಸಮಸ್ಯೆಯೂ ಕಾಡುತ್ತಿದೆ ಎಂದು ವಕೀಲರು ವಾದ ಮಂಡಿಸಿದ್ದರು.
ಆರೋಗ್ಯದ ಆಧಾರದ ಮೇಲೆ ಸಲ್ಲಿಕೆಯಾಗಿದ್ದ ಈ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಕೋರ್ಟ್, ಜೈಲು ಅಧಿಕಾರಿಗಳಿಗೆ ಅಗತ್ಯ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಮುಕ್ತ ಅವಕಾಶ ನೀಡಿರುವುದು ಸದ್ಯಕ್ಕೆ ಪವಿತ್ರಾ ಗೌಡ ಪಾಲಿಗೆ ಸಮಾಧಾನಕರ ಸಂಗತಿಯಾಗಿದೆ.


