ಕರ್ನಾಟಕದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತ್ತೊಮ್ಮೆ ಸಿಹಿ ಸುದ್ದಿಯೊಂದು ಸಿಕ್ಕಿದೆ. 2026ನೇ ವರ್ಷವನ್ನು 'ಬಡ್ತಿ ವರ್ಷ'ವೆಂದು ಘೋಷಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ತನ್ನ ಮಾತಿನಂತೆ ಮತ್ತೊಂದು ಹಂತದ ಬಡ್ತಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಶಿಕ್ಷಕರ ದಿನಾಚರಣೆಯ ಸಂಭ್ರಮದ ಹೊಸ್ತಿಲಲ್ಲಿಯೇ ಮುಖ್ಯ ಗುರುಗಳ ಹುದ್ದೆಯಿಂದ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಅಧಿಕೃತವಾಗಿ ಪ್ರಾರಂಭಗೊಂಡಿದೆ.
ಮತ್ತೊಂದು ಹಂತದ ಬಡ್ತಿ ಪ್ರಕ್ರಿಯೆ ಆರಂಭ
ಕಳೆದ ಆರು ತಿಂಗಳ ಹಿಂದಷ್ಟೇ ಮುಖ್ಯ ಗುರುಗಳಿಂದ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ಆದೇಶ ಹೊರಡಿಸಲಾಗಿತ್ತು. ಈಗ ಮತ್ತೊಮ್ಮೆ ನಿರಂತರ ಸೇವೆ ಸಲ್ಲಿಸುತ್ತಿರುವ ಅರ್ಹ ಮುಖ್ಯ ಗುರುಗಳಿಗೆ ಬಡ್ತಿ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.
ರಾಜ್ಯದ ಎಲ್ಲಾ ಅರ್ಹ ಮುಖ್ಯ ಗುರುಗಳು ಈ ಬಡ್ತಿ ಪ್ರಕ್ರಿಯೆಯ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಪ್ರಮುಖರು ಮನವಿ ಮಾಡಿದ್ದಾರೆ.
ಸಂಘಟನೆಯ ಹೋರಾಟಕ್ಕೆ ಸಿಕ್ಕ ಫಲ
ಶಿಕ್ಷಕರ ದೀರ್ಘಕಾಲದ ಬೇಡಿಕೆಗಳು ಮತ್ತು ಹಿತಾಸಕ್ತಿ ಕಾಯುವಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು, ಈ ಬಡ್ತಿ ಪ್ರಕ್ರಿಯೆ ಸುಸೂತ್ರವಾಗಿ ಜರುಗಲು ಶ್ರಮಿಸಿದೆ. ಈ ನಿರ್ಧಾರವು ಶಿಕ್ಷಕ ವಲಯದಲ್ಲಿ ಹರ್ಷ ಮೂಡಿಸಿದ್ದು, ವೃತ್ತಿಪರ ಬಡ್ತಿ ಅವಕಾಶಗಳಿಗೆ ದಾರಿ ಮಾಡಿಕೊಟ್ಟಿದೆ.


