ಬೆಂಗಳೂರು:
ಕುಖ್ಯಾತ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ಗೆ ಹೈಕೋರ್ಟ್ನಿಂದ ಭಾಗಶಃ ರಿಲೀಫ್ ಸಿಕ್ಕಿದೆ. ಪ್ರಕರಣದ ಆರೋಪಿಯಾಗಿದ್ದ ಪ್ರದೋಷ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವುದನ್ನು ಪ್ರಶ್ನಿಸಿ ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದ್ದು, ಕೆಳಹಂತದ ನ್ಯಾಯಾಲಯಕ್ಕೆ ಮಹತ್ವದ ಸೂಚನೆ ನೀಡಿದೆ.
ಹೈಕೋರ್ಟ್ ಆದೇಶದಲ್ಲೇನಿದೆ.?
ನಟ ದರ್ಶನ್ ಪರ ವಕೀಲ ನಾಸಿರ್ ಅಲಿ ಮಾಧ್ಯಮಗಳಿಗೆ ವಿವರಣೆ ನೀಡಿ, "ಪ್ರದೋಷ್ ಅವರನ್ನು ಮಾಫಿ ಸಾಕ್ಷಿ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ 59ನೇ ಸಿಸಿಹೆಚ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೆಟ್ಟಿಲೇರಿದ್ದೆವು. ಪ್ರೊಬೆಷನರಿ ವರದಿಯನ್ನು ಪರಿಗಣಿಸದೆ ಆದೇಶ ನೀಡಿರುವುದನ್ನು ನಾವು ಪ್ರಶ್ನಿಸಿದ್ದೆವು. ನಮ್ಮ ವಾದವನ್ನು ಮನ್ನಿಸಿರುವ ಹೈಕೋರ್ಟ್, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ ಹಾಗೂ ಮುಂದಿನ ಒಂದು ವಾರದೊಳಗೆ ಮರು ಆದೇಶ ಹೊರಡಿಸುವಂತೆ ಕೆಳಹಂತದ ನ್ಯಾಯಾಲಯಕ್ಕೆ ನಿರ್ದೇಶಿಸಿದೆ" ಎಂದು ತಿಳಿಸಿದ್ದಾರೆ.
ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾತಿ ಕುರಿತು ಸಸ್ಪೆನ್ಸ್
ಇದೇ ವೇಳೆ ನ್ಯಾಯಾಲಯದ ವಿಚಾರಣೆ ವೇಳೆ ನಟ ದರ್ಶನ್ ಅವರ ಖುದ್ದು ಹಾಜರಾತಿಯ ಕುರಿತೂ ಪ್ರತಿಕ್ರಿಯೆ ನೀಡಿರುವ ವಕೀಲರು, "ವಿಚಾರಣೆ ವೇಳೆ ನಟ ದರ್ಶನ್ ಅವರು ಖುದ್ದು ಹಾಜರಿರಬೇಕು ಎಂಬುದು ನಮ್ಮ ಪ್ರಮುಖ ವಾದವಾಗಿದೆ. ಈ ಕುರಿತು ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬರುವ ನಿರೀಕ್ಷೆಯಿದೆ" ಎಂದು ತಿಳಿಸಿದ್ದಾರೆ.
ಪ್ರದೋಷ್ ಮಾಫಿ ಸಾಕ್ಷಿ ಆದೇಶದ ಮರುಪರಿಶೀಲನೆಗೆ ಹೈಕೋರ್ಟ್ ಅವಕಾಶ ಮಾಡಿಕೊಟ್ಟಿರುವುದರಿಂದ, ಮುಂಬರುವ ದಿನಗಳಲ್ಲಿ ಈ ಪ್ರಕರಣದ ಕಾನೂನು ಹೋರಾಟ ಮತ್ತಷ್ಟು ಕುತೂಹಲ ಕೆರಳಿಸಿದೆ.


