ಉಡುಪಿ:
ಯಾವುದೇ ತಪ್ಪು ಮಾಡದಿದ್ದರೂ, ಪೊಲೀಸರ ಎಡವಟ್ಟಿನಿಂದಾಗಿ ಕಲ್ಲು ಕಳವು ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಲಯದ ಅಲೆದಾಡುತ್ತಿದ್ದ ಬಡ ರಿಕ್ಷಾ ಚಾಲಕನಿಗೆ ಕರ್ನಾಟಕ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದೆ. ಆಲೂರಿನ ರಿಕ್ಷಾ ಚಾಲಕ ಶೀನ ಪೂಜಾರಿ ವಿರುದ್ಧ ಗಂಗೊಳ್ಳಿ ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ಸಂಪೂರ್ಣವಾಗಿ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಆಲೂರು ನಿವಾಸಿ ಉದಯ ಶೆಟ್ಟಿಯವರನ್ನು ಗಂಗೊಳ್ಳಿಗೆ ಕರೆದೊಯ್ದಿದ್ದ ರಿಕ್ಷಾ ಚಾಲಕ ಶೀನ ಪೂಜಾರಿ, ಪೊಲೀಸರ ಮೌಖಿಕ ಸೂಚನೆಯಂತೆ ಸೌಹಾರ್ದಯುತವಾಗಿ ಠಾಣೆಗೆ ತೆರಳಿದ್ದರು.
ಈ ವೇಳೆ ಪೊಲೀಸರು ಕಾಗದ ಪತ್ರವೊಂದಕ್ಕೆ ಸಹಿ ಹಾಕಿಸಿಕೊಂಡಿದ್ದರು. ಆದರೆ, ಇದರ ಅಸಲಿ ಉದ್ದೇಶ ಬೇರೆಯೇ ಇತ್ತು. ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಶೀನ ಪೂಜಾರಿಯವರನ್ನು ಪೊಲೀಸರು 2ನೇ ಆರೋಪಿಯನ್ನಾಗಿ ಸೇರಿಸಿದ್ದರು.
ಕೋರ್ಟ್ ಸಮನ್ಸ್ ಬಂದಾಗ ಬೆಚ್ಚಿಬಿದ್ದ ಚಾಲಕ:
ಯಾವುದೇ ತಪ್ಪು ಮಾಡದ ಶೀನ ಪೂಜಾರಿಗೆ ಎರಡು ತಿಂಗಳ ಬಳಿಕ ನ್ಯಾಯಾಲಯದ ಸಮನ್ಸ್ ಬಂದಾಗಲೇ ತಮ್ಮನ್ನು ಈ ಕೇಸ್ನಲ್ಲಿ ಸಿಲುಕಿಸಿರುವ ವಿಷಯ ಗೊತ್ತಾಗಿ ಆಘಾತಕ್ಕೊಳಗಾಗಿದ್ದರು.
ಬಡ ರಿಕ್ಷಾ ಚಾಲಕನಿಗೆ ನ್ಯಾಯ ಕೊಡಿಸಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಮುಂದೆ ಬಂದಿತು. ಪ್ರತಿಷ್ಠಾನದ ಮಾರ್ಗದರ್ಶನದಲ್ಲಿ ವಕೀಲ ಎನ್. ವಿವೇಕಾನಂದ ಅವರ ಮೂಲಕ ಶೀನ ಪೂಜಾರಿ ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಪೊಲೀಸರ ವೈಫಲ್ಯ:
ಪ್ರಕರಣದಲ್ಲಿ ಶೀನ ಪೂಜಾರಿಯವರನ್ನು ಆರೋಪಿಯನ್ನಾಗಿ ಮುಂದುವರಿಸಲು ಸೂಕ್ತ ಆಧಾರಗಳು ಹಾಗೂ ದಾಖಲೆಗಳನ್ನು ಒದಗಿಸುವಂತೆ ಗಂಗೊಳ್ಳಿ ಪೊಲೀಸರಿಗೆ ಹೈಕೋರ್ಟ್ ಬರೋಬ್ಬರಿ ನಾಲ್ಕು ಬಾರಿ ಅವಕಾಶ ನೀಡಿತ್ತು. ಆದರೆ ಪೊಲೀಸ್ ಇಲಾಖೆ ಸಮರ್ಪಕ ಉತ್ತರ ನೀಡುವಲ್ಲಿ ವಿಫಲವಾಯಿತು.
ನ್ಯಾಯಮೂರ್ತಿಗಳ ಆದೇಶ:
ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್. ನಾಗಪ್ರಸನ್ನ ಅವರ ಪೀಠವು, ಕುಂದಾಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ಆರೋಪಪಟ್ಟಿಯಿಂದ ಶೀನ ಪೂಜಾರಿಯವರ ಹೆಸರನ್ನು ಕೈಬಿಡುವಂತೆ ಆದೇಶಿಸಿ, ಅವರ ಮೇಲಿನ ಕ್ರಿಮಿನಲ್ ಮೊಕದ್ದಮೆಯನ್ನು ಅಧಿಕೃತವಾಗಿ ರದ್ದುಗೊಳಿಸಿತು.
ಬಡತನದ ನಡುವೆ ಜೀವನ ಸಾಗಿಸುತ್ತಿದ್ದ ರಿಕ್ಷಾ ಚಾಲಕನಿಗೆ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕಾನೂನು ಹೋರಾಟ ಮತ್ತು ಹೈಕೋರ್ಟ್ ತೀರ್ಪು ನಿರಾಳ ತಂದಿದ್ದು, ಪೊಲೀಸ್ ಇಲಾಖೆಯ ಏಕಪಕ್ಷೀಯ ಕ್ರಮದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


